ADVERTISEMENT

ಯಮಕನಮರಡಿ: 5 ಬ್ರಿಜ್ ಕಂ ಬ್ಯಾರೇಜ ಜಲಾವೃತ

ಯಮಕನಮರಡಿ: 4 ಮನೆ ಕುಸಿತ, ಅಂಗಡಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 6:46 IST
Last Updated 23 ಜುಲೈ 2021, 6:46 IST
ಯಮಕನಮರಡಿಯ ದಡ್ಡಿ-ಮೋದಗಾ ಸಮೀಪ ಹಳ್ಳದ ನೀರಿಗೆ ಕೊಚ್ಚಿ ಹೋಗಿದ್ದ ಬೈಕ್‌ ಅನ್ನು ಜೆಸಿಬಿ ಬಳಸಿ ಮೇಲೆತ್ತಲಾಯಿತು
ಯಮಕನಮರಡಿಯ ದಡ್ಡಿ-ಮೋದಗಾ ಸಮೀಪ ಹಳ್ಳದ ನೀರಿಗೆ ಕೊಚ್ಚಿ ಹೋಗಿದ್ದ ಬೈಕ್‌ ಅನ್ನು ಜೆಸಿಬಿ ಬಳಸಿ ಮೇಲೆತ್ತಲಾಯಿತು   

ಯಮಕನಮರಡಿ: ಗುಡ್ಡ ಪ್ರದೇಶದಲ್ಲಿ ವಿಪರೀತ ಮಳೆಯಿಂದಾಗಿ ಬೆಳಗಾವಿ ತಾಲ್ಲೂಕಿನ ಸುತಗಟ್ಟಿ ಗ್ರಾಮದ ಬಳಿ ಗುರುವಾರ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ಮೇಲೆ ಮಳೆ ನೀರು ಹರಿಯಿತು.

ನೀರಿನ ರಭಸಕ್ಕೆ ಕಾರೊಂದು ರಸ್ತೆ ಪಕ್ಕದ ಗುಂಡಿಗೆ ಸರಿದು ನಿಂತಿದೆ. ಹೆದ್ದಾರಿಯಲ್ಲಿ ಸಾಗಿದ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸಿದರು. ಮಳೆಗಾಲದಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದ್ದರೂ ಹೆದ್ದಾರಿ4 ಪ್ರಾಧಿಕಾರವು ಗುತ್ತಿಗೆದಾರರಿಂದ ಕೆಲಸ ಮಾಡಿಸಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಮಳೆಗೆ 4ಮನೆಗಳ ಕುಸಿತ:-ಹುಕ್ಕೇರಿ ತಾಲೂಕಿನ ದಡ್ಡಿ, ಸಲಾಮವಾಡಿ, ಮೊದಗಾ, ಶೆಟ್ಟಿಹಳ್ಳಿ ಗ್ರಾಮದ ಪಕ್ಕದಲ್ಲಿ ಘಟಪ್ರಭಾ ನದಿಗೆ ನಿರ್ಮಾಣವಾದ 5 ಬ್ರಿಜ್ ಕಂ ಬ್ಯಾರೇಜಗಳು ಸಂಪೂರ್ಣ ಜಲಾವೃತಗೊಂಡು ಸಂಚಾರ ಸ್ಥಗಿತವಾಗಿದೆ. ಸಂಕೇಶ್ವರ ಬಳಿ ಇರುವ ಹಿರಣ್ಯಕೇಶಿ ನದಿಗೆ ಕಟ್ಟಲಾದ ಬ್ಯಾರೇಜ್ ಮತ್ತು ಯರನಾಳ ಬ್ಯಾರೇಜ್ ಮುಳಗಿದೆ.

ADVERTISEMENT

ನದಿಯ ದಡದಲ್ಲಿರುವ ಕಬ್ಬಿನ ಬೆಳೆ, ಬತ್ತದ ಗದ್ದಗೆ ನೀರು ನುಗ್ಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಮಳೆ ಹೆಚ್ಚಾಗಿದ್ದರಿಂದ ದಡ್ಡಿ ಗ್ರಾಮದ ಸುಂದರಭಾಯಿ ಪ್ರೌಢ ಶಾಲೆಯಲ್ಲಿ ಕೊಠಡಿ ಸೋರಿಕೆಯಾದ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮಕ್ಕಳನ್ನು ಬೇರೆ ಕೊಠಡಿಯಲ್ಲಿ ಸ್ಥಳಾಂತರ ಮಾಡಲಾಯಿತು.

ದಡ್ಡಿ-ಮೋದಗಾ ಹಳ್ಳದ ನೀರು ರಸ್ತೆಯ ಮೇಲೆ ಹರಿದ ಕಾರಣ ದ್ವಿಚಕ್ರ ವಾಹನವು ನೀರಿನ ಸೆಳೆತಕ್ಕೆ ಕೊಚ್ಚಿ ಹೋಯಿತು. ಜೆಸಿಬಿ ಸಹಾಯದಿಂದ ಅದನ್ನು ಹೊರತರಲಾಯಿತು. ಸಲಾಮವಾಡಿ ಗ್ರಾಮದಲ್ಲಿ ಅಂಗಡಿಗೆ ನೀರು ನುಗ್ಗಿದೆ. ಹತ್ತರಗಿ ಗ್ರಾಮದಲ್ಲಿ ಎರಡು ಮನೆಗಳು ಮಳೆಗೆ ಕುಸಿದಿವೆ. ನಾಗನೂರ ಕೆ.ಎಂ, ಕೆ.ಡಿ ಗ್ರಾಮದಲ್ಲಿ ಎರಡು ಬಿದ್ದಿವೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ ನದಿಯ ಒಳಹರಿವು 3 ಸಾವಿರ ಕ್ಯುಸೆಕ್‌ಗೆ ಹೆಚ್ಚಿದೆ. ಈಗಾಗಲೇ ಮೊದಲ ಗೇಟ್‌ನಿಂದ 2ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹತ್ತರಗಿ-ತೇರಣಿ ಹಳ್ಳವು ತುಂಬಿ ಹರಿಯುತ್ತಿದೆ. ಈ ಹಳ್ಳಕ್ಕೆ ಕಟ್ಟಲಾದ ಚೆಕ್‌ ಡ್ಯಾಂ ಒಡೆದಿದೆ.

ಶಿರೂರ ಡ್ಯಾಂನ ನದಿದಡದಲ್ಲಿರುವ ಜನರಿಗೆ ಎತ್ತರ ಪ್ರದೇಶಕ್ಕೆ ಹೋಗಲು ತಿಳಿಸಲಾಗಿದೆ, ಘಟಪ್ರಭಾ ನದಿ ಬ್ಯಾರೇಜ್‌ಗಳು ಮುಳಗಿವೆ ಸಂಚಾರ ಕೂಡ ಸ್ಥಗಿತವಾಗಿದ್ದು ಬೇರೆ ಮಾರ್ಗದ ರಸ್ತೆ ಮೂಲಕ ಜನರು ಸಂಚರಿಸಬೇಕು ಎಂದು ಹುಕ್ಕೇರಿ ತಹಶೀಲ್ದಾರ್‌ ಡಾ.ಡಿ.ಎಚ್.ಹೂಗಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.