ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್ಸಿಯು)ದಿಂದ ಈ ಸಾಲಿನಲ್ಲಿ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಪಂಡಿತ್ ರಾಜೀವ್ ತಾರಾನಾಥ್, ಡಾ.ಎಚ್. ಸುದರ್ಶನ್ ಬಲ್ಲಾಳ್ ಹಾಗೂ ವಾದಿರಾಜ ಬಿ.ದೇಶಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ತಿಳಿಸಿದರು.
'ಮಾರ್ಚ್ 9ರಂದು ಬೆಳಿಗ್ಗೆ 11ಕ್ಕೆ ಸುವರ್ಣ ವಿಧಾನಸೌಧದಲ್ಲಿ ನಡೆಯುವ 9ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು' ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.
'ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಜ್ಞಾನಿ ಹಾಗೂ ನ್ಯಾಕ್ ಅಧ್ಯಕ್ಷ ಪ್ರೊ.ವೀರೇಂದ್ರ ಸಿಂಗ್ ಚವ್ಹಾಣ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ' ಎಂದು ತಿಳಿಸಿದರು.
'35,484 ಸ್ನಾತಕ ವಿದ್ಯಾರ್ಥಿಗಳು ಹಾಗೂ 2,739 ಸ್ನಾತಕೋತ್ತರ, 188 ಪಿ.ಜಿ. ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 10 ವಿದ್ಯಾರ್ಥಿಗಳು/ ವಿದ್ಯಾರ್ಥಿನಿಯರಿಗೆ ಸುವರ್ಣ ಪದಕಗಳನ್ನು ಹಾಗೂ 86 ಪಿಎಚ್.ಡಿಗಳನ್ನು ಪ್ರದಾನ ಮಾಡಲಾಗುವುದು' ಎಂದು ವಿವರ ನೀಡಿದರು.
ಕುಲಸಚಿವರಾದ ಪ್ರೊ.ವೀರನಗೌಡ ಪಾಟೀಲ ಹಾಗೂ ಪ್ರೊ.ಬಸವರಾಜ ಪದ್ಮಶಾಲಿ ಮತ್ತು ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.