ಮೂಡಲಗಿ: ಪ್ರಸಕ್ತ ಸಾಲಿನ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಹೆಚ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಉತ್ತಮ ಬೆಲೆಗೆ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದಂತಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು, ‘ಕೇಂದ್ರ ಸರ್ಕಾರವು ಗೋಧಿ ಸೇರಿದಂತೆ ಪ್ರಮುಖ ಆರು ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿದೆ. ಚನ್ನಂಗಿ ಬೇಳೆ ಪ್ರತಿ ಕ್ವಿಂಟಲ್ಗೆ ₹ 425 ಕನಿಷ್ಠ ಬೆಂಬಲ ಬೆಲೆ ಹೆಚ್ಚಳವಾಗಿದ್ದು, ಒಂದು ಕ್ವಿಂಟಲ್ಗೆ ₹ 6,425 ನಿಗದಿ ಮಾಡಲಾಗಿದೆ. ಗೋಧಿಗೆ ಪ್ರತಿ ಕ್ವಿಂಟಲ್ಗೆ ₹ 150 ಹೆಚ್ಚಳ ಮಾಡಲಾಗಿದ್ದು ಕ್ವಿಂಟಲ್ಗೆ ₹ 2,275, ಕಡಲೆ ₹ 105 ಹೆಚ್ಚಳ ಮಾಡಲಾಗಿದ್ದು ಒಂದು ಕ್ವಿಂಟಲ್ಗೆ ₹ 5440, ಬಾರ್ಲಿಗೆ ₹ 115 ಹೆಚ್ಚಳ ಮಾಡಲಾಗಿದ್ದು ಒಂದು ಕ್ವಿಂಟಲ್ಗೆ ₹ 1850, ಸಾಸಿವೆಗೆ ₹ 200 ಹೆಚ್ಚಳ ಮಾಡಿದ್ದು, ಒಂದು ಕ್ವಿಂಟಲ್ಗೆ ₹ 5650, ಕುಸುಬೆಗೆ ₹ 150 ಹೆಚ್ಚಳ ಮಾಡಿದ್ದು ಒಂದು ಕ್ವಿಂಟಲ್ಗೆ ₹ 5800 ದರ ನಿಗದಿ ಪಡಿಸಲಾಗಿದೆ ಎಂದಿದ್ದಾರೆ.
2013-14ನೇ ಸಾಲಿನ ಬೆಂಬಲ ಬೆಲೆ ಗಮನಿಸಿದರೆ ಈ ಬಾರಿ ಶೇ 50ರಷ್ಟು ಹೆಚ್ಚಳ ಮಾಡಿರುವುದರಿಂದ ರೈತರ ಆದಾಯ ವೃದ್ಧಿಸುವ ಜೊತೆಗೆ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.