ADVERTISEMENT

ರಾಮದುರ್ಗ: ಅನುದಾನ ಬಳಕೆ ಮಾಡದ ಪಿಡಿಒ ತರಾಟೆಗೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:12 IST
Last Updated 23 ಜುಲೈ 2025, 2:12 IST
ರಾಮದುರ್ಗ ತಾಲ್ಲೂಕಿನ ಓಬಳಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡೂವರೆ ವರ್ಷಗಳ ನಂತರ ಜರುಗಿದ ಗ್ರಾಮ ಸಭೆಯಲ್ಲಿ ಪಿಡಿಒ ಸದಾಶಿವ ಹಲಗಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು
ರಾಮದುರ್ಗ ತಾಲ್ಲೂಕಿನ ಓಬಳಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡೂವರೆ ವರ್ಷಗಳ ನಂತರ ಜರುಗಿದ ಗ್ರಾಮ ಸಭೆಯಲ್ಲಿ ಪಿಡಿಒ ಸದಾಶಿವ ಹಲಗಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು   

ರಾಮದುರ್ಗ: ಮೂರು ವರ್ಷಗಳಿಂದಲೂ ಗ್ರಾಮ ಪಂಚಾಯ್ತಿಯಲ್ಲಿನ 15ನೇ ಹಣಕಾಸು ಯೋಜನೆಯ ಅನುದಾನವನ್ನು ಬಳಕೆ ಮಾಡಿಕೊಳ್ಳದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಸೋಮವಾರ ಓಬಳಾಪೂರ ಪಂಚಾಯ್ತಿ ಅಧ್ಯಕ್ಷ ಅಡಿವೆಪ್ಪ ದ್ಯಾಮನ್ನವರ ಅಧ್ಯಕ್ಷತೆಯಲ್ಲಿ ಸುಮಾರು ಎರಡುವರೆ ವರ್ಷಗಳ ನಂತರ ನಡೆದ ಗ್ರಾಮ ಸಭೆಯಲ್ಲಿ ಮೂರು ವರ್ಷಗಳ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಸುಮಾರು ₹25 ಲಕ್ಷ ಅನುದಾನವನ್ನು ಪಂಚಾಯ್ತಿಯ ನೂತನ ಕಟ್ಟಡಕ್ಕೆ ಕೊಡುವ ಬಗ್ಗೆ ಅಭವೃದ್ಧಿ ಅಧಿಕಾರಿ ಸದಾಶಿವ ಹಲಗಿ ಪ್ರಸ್ತಾಪ ಮಾಡುತ್ತಿದ್ದಂತೆ ಮೂರು ವರ್ಷ ಯಾವುದೇ ಕ್ರಿಯಾ ಯೋಜನೆ ಮಾಡದೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಕ್ಕೆ ಬಳಕೆ ಮಾಡದಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ನರೇಗಾ ಅಡಿ ಯಾವುದೇ ಕಾಮಗಾರಿ ಕೈಗೊಳ್ಳದೆ ಕೂಲಿಕಾರರಿಗೆ ಕೆಲಸದ ಮಾಹಿತಿ ಕೂಡ ನೀಡದೆ ಕೆಲಸ ನೀಡದಿರುವುದಕ್ಕೆ ಪಿಡಿಓ ಹಲಗಿ ಅವರನ್ನು ತರಾಟೆಗೆ ತೆಗೆದುಕೊಂಡಾಗ ಕೂಲಿಕಾರರು ಜಾಬ್ ಕಾರ್ಡ್‌ ಮಾಡಿಸಿ ಬ್ಯಾಂಕ್ ಖಾತೆಯ ವಿವಿರ ನೀಡಿ ಅರ್ಜಿ ಸಲ್ಲಿಸಿದರೆ ನರೇಗಾ ಅಡಿ ಕೆಲಸ ನೀಡುವುದಾಗಿ ಪಿಡಿಒ ಹಲಗಿ ಹೇಳಿದರು.

ADVERTISEMENT

ಹಿಂದಿನ ಗ್ರಾಮ ಸಭೆಯ ಠರಾವು ಓದಿ, ನರೇಗಾ ಕಾಮಗಾರಿ ಟೆಂಡರ್ ಕರೆದ ದಿನಪತ್ರಿಕೆ ಸಭೆಯಲ್ಲಿ ಬಹಿರಂಗ ಪಡಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಾಗ ದಾಖಲೆಗಳನ್ನು ತರುವುದಾಗಿ ಹೋದ ವ್ಯಕ್ತಿ ಸಭೆ ಅಂತ್ಯವಾಗುವವರೆಗೂ ಬಾರದಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು. 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ ಮತ್ತು ಅಕ್ಷರ ದಾಸೋಹದ ಕೊಠಡಿ ದುರಸ್ತಿಗೆ ಗ್ರಾಮಸ್ಥರು ಒತ್ತಾಯಿಸಿದರು.

ಸಭೆಯಲ್ಲಿ ಗ್ರಾಮಸ್ಥರು ಚರ್ಚಿಸುವ ವಿಷಯದ ನಿರ್ಣಯ ಬರೆಯುವುದಕ್ಕಿಂತ ಸಭಿಕರ ಸಹಿ ಮಾಡಿಸುವದರಲ್ಲಿಯೇ ಪಂಚಾಯ್ತಿ ಸಿಬ್ಬಂದಿ ತಲ್ಲೀನರಾಗಿದ್ದರು. ಗ್ರಾಮಸ್ಥರು ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಒಬ್ಬರ ಮೇಲೋಬ್ಬರು ಹಾಕಿ ನುಣುಚಿಕೊಂಡರು.

2 ಗಂಟೆ ತಡವಾಗಿ ಆರಂಭವಾದ ಸಭೆ: 2 ವರ್ಷಕ್ಕೂ ಅಧಿಕ ಸಮಯದ ನಂತರ ನಡೆದ ಗ್ರಾಮಸಭೆಗೆ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಎಚ್.ಬಿ. ವಕ್ಕುಂದ 2 ಗಂಟೆ ತಡವಾಗಿ ಆಗಮಿಸಿದರು. ಸಭೆಗೆ ಶಿಕ್ಷಣ ಇಲಾಖೆಯ ರಾಜಶೇಖರ ಹಿರೇಮಠ, ಗ್ರಾಮ ಆಡಳಿತಾಧಿಕಾರಿ ಹೊರತುಪಡಿಸಿ ಯಾವುದೇ ಇಲಾಖೆಯ ಅಧಿಕಾರಿಗಳು ಸಭೆಗೆ ಬಂದಿರಲಿಲ್ಲ. ಸಭೆಯ ಸೂಚನಾ ಪತ್ರ ಕೊಟ್ಟಿದ್ದರೂ ಅವರು ಬಂದಿಲ್ಲ ಎಂದು ಪಿಡಿಒ ಉತ್ತರ ನೀಡಿದರು. ಸಭೆಗೆ ಬಾರದೆ ಇರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ತಿಳಿಸಲು ಸಭೆ ನಿರ್ಧರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.