ADVERTISEMENT

ರಾಮದುರ್ಗ | ಅರ್ಧಕ್ಕೆ ನಿಂತ ಏತ ನೀರಾವರಿ ಯೋಜನೆಗಳು: ತಪ್ಪದ ರೈತರ ಪರದಾಟ

ಚನ್ನಪ್ಪ ಮಾದರ
Published 3 ಮಾರ್ಚ್ 2026, 2:09 IST
Last Updated 3 ಮಾರ್ಚ್ 2026, 2:09 IST
ರಾಮದುರ್ಗ ತಾಲ್ಲೂಕಿನಲ್ಲಿ ಅರ್ಧಕ್ಕೆ ನಿಂತ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಮುಖ್ಯ ಗೇಟುಗಳು ತುಕ್ಕು ಹಿಡಿಯುತ್ತಿವೆ
ರಾಮದುರ್ಗ ತಾಲ್ಲೂಕಿನಲ್ಲಿ ಅರ್ಧಕ್ಕೆ ನಿಂತ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಮುಖ್ಯ ಗೇಟುಗಳು ತುಕ್ಕು ಹಿಡಿಯುತ್ತಿವೆ   

ರಾಮದುರ್ಗ: ರಾಮದುರ್ಗ ಕ್ಷೇತ್ರದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಅಭಿವೃದ್ಧಿ ಎಂಬುದೇ ಮರೀಚಿಕೆ ಆಗಿದೆ. ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ, ಮಂಜೂರಾಗಿದ್ದ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆ ಒಂದೂವರೆ ದಶಕ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಈ ಭಾಗದ ರೈತರ ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದರೂ, ಕಾಲುವೆ ಅಂತ್ಯದವರೆಗೂ ನೀರು ತಲುಪುತ್ತಿಲ್ಲ. ಹಾಗಾಗಿ ಈ ಯೋಜನೆ ಇದ್ದೂ ಇಲ್ಲದಂತಾಗಿದೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವಿದ್ದಾಗ, ₹444 ಕೋಟಿ ವೆಚ್ಚದಲ್ಲಿ ನವಿಲುತೀರ್ಥ ಅಣೆಕಟ್ಟೆಯಿಂದ ನೀರು ತಂದು ನಲ್ಲಿಗಳ ಮೂಲಕ ತಾಲ್ಲೂಕಿನ ಜನರಿಗೆ ಒದಗಿಸಲು ಯೋಜನೆ ಆರಂಭಿಸಲಾಗಿದೆ. ಜಲಜೀವನ ಮಿಷನ್‌ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ನಲ್ಲಿ ಅಳವಡಿಸಲಾಗಿದೆ. ಆದರೆ, ಜನರಿಗೆ ಇನ್ನೂ ಯೋಜನೆ ಲಾಭ ಸಿಕ್ಕಿಲ್ಲ. ನದಿಯಿಂದ ನೀರು ತಂದು ಗ್ರಾಮೀಣ ಭಾಗದ ಜನರಿಗೆ ಒದಗಿಸುವ ಯೋಜನೆ ನಿಂತುಹೋಗಿದೆ. 

ADVERTISEMENT

ರಾಮದುರ್ಗ–ಸುರೇಬಾನ, ನರಸಾಪುರ–ಗೊಡಚಿ, ಕಟಕೋಳ–ಚಂದರಗಿ ಮಾರ್ಗಗಳಲ್ಲಿ  ವಾಹನಗಳು ಓಡಾಡಲು ಸಾಧ್ಯವಾಗದಷ್ಟು ರಸ್ತೆ ಹದಗೆಟ್ಟಿವೆ.

ತಾಲ್ಲೂಕು ಕೇಂದ್ರವಾದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮುಖ್ಯವಾಗಿ ಕ್ರೀಡಾಂಗಣವೇ ಇಲ್ಲ! ತುರ್ತಾಗಿ ತಾಲ್ಲೂಕಿಗೊಂದು ಸುಸಜ್ಜಿತ ಕ್ರೀಡಾಂಗಣದ ಅವಶ್ಯಕತೆ ಇದೆ. ರಾಮದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ನೀಗಿಸಿ, ಸೂಕ್ತ ಉಪಚಾರಕ್ಕೆ ಸರ್ಕಾರ ಮುಂದಾಗಬೇಕಿದೆ.

ರಾಮದುರ್ಗ ತಾಲ್ಲೂಕಿನಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಶಾಸಕರು ಸ್ವಾರ್ಥಕ್ಕಾಗಿ ರಾಜಕಾರಣ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ
ಮಲ್ಲಣ್ಣ ಯಾದವಾಡ, ನಿರ್ದೇಶಕ ಬಿಡಿಸಿಸಿ ಬ್ಯಾಂಕ್‌
ನೀರಾವರಿ ಯೋಜನೆಗಳಿಗಾಗಿ ಚಾತಕಪಕ್ಷಿಯಂತೆ ಕಾದು ಕುಳಿತಿರುವ ರೈತರಿಗೆ ನೀರು ಒದಗಿಸಬೇಕು
ಜಗದೀಶ ದೇವರಡ್ಡಿ ,ಅಧ್ಯಕ್ಷ ರೈತ ಸಂಘ ರಾಮದುರ್ಗ ತಾಲ್ಲೂಕು
ಖಾನಾಪುರದಲ್ಲಿ ಕೈಗಾರಿಕೆಗಳು ಇಲ್ಲದ್ದರಿಂದ ಉದ್ಯೋಗಕ್ಕಾಗಿ ಹೊರರಾಜ್ಯಗಳಿಗೆ ಅಲೆಯುವಂತಾಗಿದೆ. ಇದನ್ನು ತಪ್ಪಿಸಲು ಸ್ಥಳೀಯವಾಗಿಯೇ ಕೈಗಾರಿಕೆಗಳು ತಲೆ ಎತ್ತಬೇಕಿದೆ
ಎಂ.ಜಿ ಬೆನಕಟ್ಟಿ, ಸ್ಥಳೀಯ ಖಾನಾಪುರ 
ಬೈಲಹೊಂಗಲದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ 
ಎಫ್.ಎಸ್.ಸಿದ್ದನಗೌಡರ, ವಕೀಲ ಬೈಲಹೊಂಗಲ
ಬೈಲಹೊಂಗಲದಲ್ಲಿನ ಟ್ರಾಫಿಕ್‌ ಸಮಸ್ಯೆ ನೀಗಿಸಲು ಕ್ರಮ ವಹಿಸಬೇಕಿದೆ
ಶಿವನಾಗ ಅವ್ವಕ್ಕನವರ, ವೈದ್ಯ ಬೈಲಹೊಂಗಲ
ಬಜೆಟ್ ನಿರೀಕ್ಷೆಗಳು

ತಲೆ ಎತ್ತಬೇಕಿವೆ ಕೈಗಾರಿಕೆಗಳು

ಪ್ರಸನ್ನ ಕುಲಕರ್ಣಿ

ಖಾನಾಪುರ: ದಟ್ಟ ಅರಣ್ಯದಿಂದ ಸುತ್ತುವರಿದ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದ ಕಾರ್ಖಾನೆ ವಾಣಿಜ್ಯೋದ್ಯಮ ಗಾರ್ಮೆಂಟ್ಸ್ ಗುಡಿ ಕೈಗಾರಿಕೆ ಕರಕುಶಲ ಕೇಂದ್ರ ಇಲ್ಲ.  ಸ್ಥಳೀಯವಾಗಿ ಉದ್ಯೋಗವಕಾಶ ಇಲ್ಲದ ಕಾರಣ ತಾಲ್ಲೂಕಿನ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ನೆರೆಯ ಗೋವಾ ಮತ್ತು ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲಕರ ವಾತಾವರಣ ಮೂಲಸೌಕರ್ಯ ಸಾರಿಗೆ ಸೌಲಭ್ಯವಿದೆ. ಅರಣ್ಯ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶಗಳಿವೆ.  ಆದರೆ ಜನರ ಬೇಡಿಕೆ ಈಡೇರಿಸಲು ರಾಜಕೀಯ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ. ಉದ್ಯೋಗ ಸೃಷ್ಟಿಗೆ ಸೂಕ್ತ ಪ್ರಯತ್ನ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಲೇ ಇದೆ. ‘ಖಾನಾಪುರ ತಾಲ್ಲೂಕಿನಲ್ಲಿ ಭತ್ತ ಮಾವು ಚಿಕ್ಕು ಗೋಡಂಬಿ ಹಸಿ ಮೆಣಸಿನಕಾಯಿ ಗೆಣಸು ಆಲೂಗಡ್ಡೆ ಹೇರಳವಾಗಿ ಬೆಳೆಯಲಾಗುತ್ತಿದೆ. ಜತೆಗೆ ಜೇನು ಸಿದ್ಧವಾಗುತ್ತದೆ. ಈ ಉತ್ಪನ್ನಗಳನ್ನು ಕೃಷಿ ಸಂಸ್ಕರಣಾ ಕೇಂದ್ರಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರ ಬದಲಿಗೆ ಈ ಉತ್ಪನ್ನ ಬಳಸಿ ಸ್ಥಳೀಯವಾಗಿಯೇ ಅಗತ್ಯ ವಸ್ತು ತಯಾರಿಸಲು ಕ್ರಮ ವಹಿಸಿದರೆ ಉದ್ಯೋಗ ಸೃಷ್ಟಿಯಾಗುತ್ತದೆ’ ಎನ್ನುತ್ತಾರೆ ಸ್ಥಳೀಯ ಮಹಿಳೆ ಲಕ್ಷ್ಮಿ  ಹಮ್ಮಣ್ಣವರ.

ಬೇಕಿದೆ ನೀರಾವರಿ ಸೌಲಭ್ಯ

ರವಿಕುಮಾರ ಹುಲಕುಂದ

ಬೈಲಹೊಂಗಲ: ಮಲಪ್ರಭಾ ನದಿ ಮಡಿಲಲ್ಲಿ ಇದ್ದರೂ ಬೈಲಹೊಂಗಲ ನಗರ ಮತ್ತು ಸುತ್ತಲಿನ ಪ್ರದೇಶ ನೀರಾವರಿ ಸೌಲಭ್ಯದಿಂದ ವಂಚಿತವಾಗಿದೆ. ಬೈಲಹೊಂಗಲದಿಂದ ಆರೇ ಕಿ.ಮೀ ದೂರದ ನಯಾನಗರದಲ್ಲಿ ಮಲಪ್ರಭಾ ನದಿ ಹರಿದಿದೆ. ವರ್ಷವಿಡೀ ಮೈದುಂಬಿ ಹರಿಯುವ ಈ ನದಿ ನೀರಿನಿಂದ ಜನರು–ಜಾನುವಾರುಗಳಿಗೆ ಕುಡಿಯಲು ಮಾತ್ರ ಅನುಕೂಲವಾಗಿದೆ. ಆದರೆ  ಶಾಶ್ವತವಾಗಿ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ಹಾಗಾಗಿ ನೀರಾವರಿ ಸೌಲಭ್ಯ ಕಲ್ಪಿಸಬೇಕಿದೆ. ಎರಡು ದಶಕಗಳಿಂದ ಅರ್ಧಕ್ಕೆ ನಿಂತ ಚಚಡಿ ಮತ್ತು ಮುರಗೋಡ ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡಬೇಕಿದೆ. ತಿಗಡಿ ಹರಿನಾಲಾ ಜಲಾಶಯದ ನೀರನ್ನು ರೈತರ ಜಮೀನುಗಳಿಗೆ ಹರಿಸಲು ಅನುದಾನ ಕೊಡಬೇಕಿದೆ. ದೊಡವಾಡ ಬುಡರಕಟ್ಟಿ ಹಾಗೂ ಬೆಳವಡಿಗೆ ಹೊಸ ಏತ ನೀರಾವರಿ ಯೋಜನೆಗಳನ್ನು ಘೋಷಿಸಬೇಕಿದೆ.  ಬೈಲಹೊಂಗಲದಲ್ಲಿ ಇರುವ ಕಿತ್ತೂರು ಚನ್ನಮ್ಮನ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕಿದೆ. ಬ್ರಿಟಿಷರ ಆಡಳಿತ ಕಾಲದಿಂದಲೂ ಉಪವಿಭಾಗ ಕೇಂದ್ರವಾಗಿದ್ದ ಬೈಲಹೊಂಗಲವನ್ನು ಜಿಲ್ಲಾಕೇಂದ್ರವಾಗಿ ಘೋಷಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಜತೆಗೆ ಕಿತ್ತೂರು ಚನ್ನಮ್ಮನ ಅಭಿವೃದ್ಧಿ ಪ್ರಾಧಿಕಾರಕ್ಕೆ ₹200 ಕೋಟಿ ಅನುದಾನ ಮೀಸಲಿಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.