ADVERTISEMENT

ಚನ್ನಮ್ಮನ ರಥ ತಾರದ ಜಿಲ್ಲಾಡಳಿತ: ಇತಿಹಾಸದತ್ತ ಅಧಿಕಾರಿಗಳ ನಿರ್ಲಕ್ಷ್ಯ

ಸಂತೋಷ ಈ.ಚಿನಗುಡಿ
Published 4 ನವೆಂಬರ್ 2025, 4:34 IST
Last Updated 4 ನವೆಂಬರ್ 2025, 4:34 IST
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಅವಶೇಷಗಳು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಅವಶೇಷಗಳು   

ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ ಸಂಚಾರ ಮಾಡಿದ ರಥದ ಅವಶೇಷಗಳ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ಅನಾಥವಾಗಿ ಬಿದ್ದ ರಥದ ಐತಿಹಾಸಿಕ ಕುರುಹುಗಳು ಕಿತ್ತೂರು ಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲಲಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇವುಗಳನ್ನು ರಕ್ಷಿಸಿ, ಕಿತ್ತೂರು ವಸ್ತು ಸಂಗ್ರಹಾಲಯಕ್ಕೆ ತರಬೇಕು, ಹೆಚ್ಚಿನ ಶೋಧನೆಗೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಗೆ ಜಿಲ್ಲಾಧಿಕಾರಿ ಇನ್ನೂ ಸ್ಪಂದಿಸಿಲ್ಲ.

ಇದೂವರೆಗೆ ಕುದುರೆ ಮೇಲೆ ಕುಳಿತ ಚನ್ನಮ್ಮನ ಕಲ್ಪನೆ ಮಾತ್ರ ಎಲ್ಲೆಡೆ ನೋಡಲು ಸಿಗುತ್ತದೆ. ಬೈಲಹೊಂಗಲದ ಸಮಾಧಿ ಸ್ಥಳದಲ್ಲಿ ಚನ್ನಮ್ಮ ಲಿಂಗಪೂಜೆ ಮಾಡಿಕೊಳ್ಳುವ ಭಂಗಿಯ ‍ಪ್ರತಿಮೆ ಇದೆ. ಇದರ ಹೊರತಾಗಿ ವೀರರಾಣಿ ಹೇಗಿದ್ದಳು ಎಂಬ ಕುರುಹುಗಳು ವಿರಳವಾಗಿವೆ. ಆದರೆ, ಎಲ್ಲ ಕಲ್ಪನೆಗಳನ್ನೂ ಹುಬ್ಬೇರಿಸುವಂತೆ ಮಾಡುವ ಕುರುಹು ಎಂದರೆ ರಥ!

ಏನಿದರ ಇತಿಹಾಸ?: ಕಲಹಳ್ಳಿಯ ಭುಜಬಲ ಹನಮಗೊಂಡ ಅವರ ಮನೆ ಪಕ್ಕದ ಖಾಲಿಜಾಗದಲ್ಲಿ ಈ ರಥದ ಎರಡು ಚಕ್ರಗಳು ಸಿಕ್ಕಿವೆ. ಹನಮಗೊಂಡ ಮನೆತನದವರು ತಲೆತಲಾಂತರಗಳಿಂದ ಈ ಚಕ್ರಗಳನ್ನು ‘ಚನ್ನಮ್ಮನ ರಥ’ ಎಂದೇ ಪೂಜಿಸುತ್ತ ಬಂದಿದ್ದಾರೆ. ಇದೇ ಜಾಗದಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಕಾರಹುಣ್ಣಿಮೆಯ ಕರಿಹರಿಯುವ ದಿನದಂದು ಎತ್ತುಗಳ ಪೂಜೆ ಮಾಡುತ್ತ ಬಂದಿದ್ದಾರೆ. ಈಗಲೂ ಅದೇ ಪದ್ಧತಿ ಮುಂದುವರಿದಿದೆ.

ADVERTISEMENT

ಇದು ಚನ್ನಮ್ಮನದ್ದೇ ರಥ ಎಂಬ ಸಂಗತಿಯನ್ನು ಊರ ಹಿರಿಯರು ಬಾಯಿಯಿಂದ ಬಾಯಿಗೆ ದಾಟಿಸುತ್ತ ಬಂದಿದ್ದಾರೆ. ಗ್ರಾಮಸ್ಥ ಶ್ರೀಶೈಲ ಬಸಪ್ಪ ಸಾವಂತ ಇವುಗಳ ಕುರಿತು ಸಂಶೋಧಕರ ಗಮನ ಸೆಳೆದರು. ಸಾಹಿತಿ, ವಕೀಲರೂ ಆದ ಜಮಖಂಡಿಯ ತಾತಾಸಾಹೇಬ ಬಾಂಗಿ ಪರಿಶೀಲಿಸಿ ಖಾತ್ರಿ ಮಾಡಿಕೊಂಡರು. ಜಾನಪದ ವಿದ್ವಾಂಸರಾದ ಪ್ರೊ.ಸಿ.ಕೆ.ನಾವಲಗಿ ಅದನ್ನು ಕೆದಕಿ, ಜನಕಥನದ ಸನ್ನಿವೇಶಗಳಲ್ಲಿ ಇದರ ಮಾತು ಇದೆಯೇ ಎಂದು ತಡಕಾಡಿದರು. ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿದರು.

ದಶಕಗಳ ಹಿಂದೆ ಈ ಚಕ್ರಗಳು ‍ಪೂರ್ಣಪ್ರಮಾಣದಲ್ಲಿದ್ದವು. ಕಾಲ ಕಳೆದಂತೆ ಶಿಥಿಲಗೊಂಡಿವೆ. ಚಕ್ರದ ಮಧ್ಯಭಾಗ ಅಚ್ಚ ಹಾಕುವ ಗಡ್ಡಿಯು ಕಬ್ಬಿಣ ಮತ್ತು ಮರದಿಂದ ತಯಾರಾಗಿದೆ. ಅದರ ಸುತ್ತಲೂ ವೃತ್ತಾಕಾರದ ಕಟ್ಟಿಗೆಯ ಹಲಗೆ ಇದೆ. ಅದರ ಸುತ್ತಲಿನ ಅಂಚಿಗೆ ಎರಡು ಇಂಚು ದಪ್ಪನಾದ ಕಬ್ಬಿಣದ ಬಳೆ ಆಕಾರದ ಹಳಿ ಹಾಕಲಾಗಿದೆ.

ಆಧಾರಗಳೇನು?: ಕಿತ್ತೂರು ದೇಸಗತಿಯ ಇತಿಹಾಸ ಹೆಚ್ಚಾಗಿ ದಾಖಲಾಗಿರುವುದು ಜನಕಥನಗಳಲ್ಲೇ. ಇಂಥದ್ದೇ ಒಂದು ಜನಕಥನ ಈಗ ರಾಣಿ ಚನ್ನಮ್ಮ ರಥದಲ್ಲಿ ಸಂಚರಿಸುತ್ತಿದ್ದಳು ಎಂಬುದನ್ನು ದಾಖಲಿಸಿದೆ. ಚನ್ನಮ್ಮನ ಬಳಿ ರಥವೂ ಇತ್ತು, ರಥದಲ್ಲಿ ಸಂಚಾರ ಕೂಡ ಮಾಡುತ್ತಿದ್ದಳು ಎಂಬ ಅಭಿಪ್ರಾಯವನ್ನು ಪ್ರೊ.ನಾವಲಗಿ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿ ವರ್ಷವೂ ಕಿತ್ತೂರು ಉತ್ಸವದಲ್ಲಿ ಆಗ್ರಹಿಸುತ್ತಲೇ ಬರಲಾಗಿದೆ. ಆದರೂ ಜಿಲ್ಲಾಡಳಿತ ಕಿವಿಗೊಟ್ಟಿಲ್ಲ. ಪರಿಣಾಮ ದೊಡ್ಡ ಇತಿಹಾಸದ ಕುರುಹುಗಳು ಅನಾಥವಾಗಿ ಬಿದ್ದವೆ ಎಂದೂ ಅವರು ಭೇಸರ ವ್ಯಕ್ತಪಡಿಸುತ್ತಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಅವಶೇಷಗಳು

ಕಲಹಳ್ಳಿಯಲ್ಲಿ ಏಕಿವೆ?

ಕಿತ್ತೂರು ಸಂಸ್ಥಾನದ ಸಮೃದ್ಧ ಸಂಪತ್ತಿನ ಮೇಲೆ ಪಟವರ್ಧನ ರಾಜರಿಗೆ ತುಂಬ ವ್ಯಾಮೋಹವಿತ್ತು. ಈಗ ಕಲಹಳ್ಳಿಯಲ್ಲಿ ಸಿಕ್ಕಿರುವ ರಥದ ಗಾಲಿಗಳು ಜಮಖಂಡಿಯ ಪಟವರ್ಧನ ಸಂಸ್ಥಾನದ ದೊರೆಗಳ ಸಂಚಿನಿಂದಾಗಿ ಅಲ್ಲಿಗೆ ಒಯ್ದಿರುವ ಸಾಧ್ಯತೆ ಇದೆ. ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಹಲವಾರು ದಾಖಲೆಗಳು ಅವಶೇಷಗಳು ಜಮಖಂಡಿ ಸುತ್ತಲಿನ ಪ್ರದೇಶದಲ್ಲಿ ಕಂಡುಬರುತ್ತವೆ. ಕಿತ್ತೂರು ಸಂಸ್ಥಾನದ ಪಲ್ಲಕ್ಕಿಯೊಂದು ಜಮಖಂಡಿ ಪಟವರ್ಧನ ಸಂಸ್ಥಾನದ ಅರಸರ ಬಳಿ ಇತ್ತು. ಲಿಲಾವ್‌ ನಡೆದ ಸಂದರ್ಭದಲ್ಲಿ ಆಗಿನ ನಿಡಸೋಸಿ ಮಠದ ಸ್ವಾಮೀಜಿ ಖರೀದಿಸಿದ್ದರು. ಈಗಲೂ ಆ ಪಲ್ಲಕ್ಕಿ ನಿಡಸೋಸಿ ಮಠದಲ್ಲಿದೆ ಎಂಬುದನ್ನು ಸಂಶೋಧಕರಾದ ಸುಭಾಷ ಹಿರೇಮಠ ಹಾಗೂ ರು.ಮ.ಷಡಕ್ಷರಯ್ಯ ಖಚಿತಪಡಿಸಿದ್ದಾರೆ. ಕಿತ್ತೂರು ರಾಜಸೀಮೆಯು ಗೋವೆಯವರೆಗೂ ಹರಡಿತ್ತು. ಹಲಸಿ ನಂದಘಡ ಖಾನಾಪುರ ಬೆಳಗಾವಿ ಸಂ‍ಪಗಾವಿ ಕಾಕತಿ ಮುಂತಾದ ಪ್ರದೇಶಗಳಿಗೆ ಹೋಗಿ ಬರಲು ರಾಜ–ರಾಣಿಯರು ರಥವನ್ನು ಬಳಸಿದ್ದಾರೆ. ಆಂಗ್ಲೋ–ಕಿತ್ತೂರು ಯುದ್ಧದಲ್ಲೂ ರಥ ಬಳಸಿರುವ ಸಾಧ್ಯತೆ ಇದೆ. ಈ ಬಗ್ಗೆ ಸಂಶೋಧನೆಗೆ ಮುಂದಾಗಬೇಕಿದೆ’ ಎಂಬುದು ಸಂಶೋಧಕರ ಆಶಯ.

ಕಿತ್ತೂರು ಇತಿಹಾಸ ಕಟ್ಟಿರುವುದೇ ಜನಕಥನಗಳಿಂದ. ರಾಣಿ ಚನ್ನಮ್ಮ ರಥ ಏರಿದ್ದಳು ಎಂಬ ಕಥನವನ್ನೂ ಜನಪದ ನೀಡಿದ್ದಾರೆ. ಇವುಗಳ ಮೇಲೆ ಬೆಳಕು ಚೆಲ್ಲಬೇಕಿದೆ
-ಪ್ರೊ.ಸಿ.ಕೆ.ನಾವಲಗಿ, ಜಾನಪದ ವಿದ್ವಾಂಸ
ಕಿತ್ತೂರಿನಲ್ಲಿರುವ ವಸ್ತುಸಂಗ್ರಹಾಲಯ ಮೇಲ್ದರ್ಜೆಗೇರಿಸುವ ಸಿದ್ಧತೆಗಳು ನಡೆದಿವೆ. ಆಗ ಚನ್ನಮ್ಮನ ರಥದ ಚಕ್ರಗಳೂ ಸೇರಿದಂತೆ ಎಲ್ಲ ಕುರುಹು ಸಂಗ್ರಹಿಲಾಗುವುದು
-ಬಾಬಾಸಾಹೇಬ ಪಾಟೀಲ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.