ಅಥಣಿ (ಬೆಳಗಾವಿ ಜಿಲ್ಲೆ): ಕೋವಿಡ್ ಲಾಕ್ಡೌನ್ನಿಂದ ಕೆಲಸವಿಲ್ಲದೆ, ಗಳಿಕೆ ಇಲ್ಲದೆ ಕಂಗಲಾದವರಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೆರವಿನ ಹಸ್ತ ಚಾಚಿದ್ದಾರೆ. ಪಟ್ಟಣ ಹಾಗೂ ತಾಲ್ಲೂಕಿನ ಬಿಪಿಎಲ್, ಎಪಿಎಲ್ ಸೇರಿದಂತೆ ಎಲ್ಲ ಕುಟುಂಬದವರಿಗೆ ಸೇರಿ ದಿನಸಿ ಕಿಟ್ ವಿತರಣೆ ಆರಂಭಿಸಿದ್ದಾರೆ.
ಅಥಣಿ ಮತ ಕ್ಷೇತ್ರದ ಬಡವರಿಗೆ ದಿನಸಿ ಕಿಟ್ ವಿತರಿಸಲು ಯೋಜಿಸಲಾಗಿದೆ. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಪಟ್ಟಣದ 23 ವಾರ್ಡ್ಗಳಲ್ಲಿ ಬಿಪಿಎಲ್ ಕುಟುಂಬದವರಿಗೆ 4 ಸಾವಿರ ಕ್ವಿಂಟಲ್ ಆಹಾರ ಧಾನ್ಯವನ್ನು (ತಲಾ 5 ಕೆ.ಜಿ. ಗೋಧಿ ಮತ್ತು 5 ಕೆ.ಜಿ. ಜೋಳ) ವಿತರಿಸಿದ್ದರು.
ತಮ್ಮ ತಂದೆ–ತಾಯಿ ಹೆಸರಿನಲ್ಲಿ ನೋಂದಾಯಿಸಿರುವ ‘ಸತ್ಯ ಸಂಗಮ ಸೇವಾ ಟ್ರಸ್ಟ್’ ಮೂಲಕ ತಿಂಗಳಿಗೆ ಆಗುವಷ್ಟು (7 ಕೆ.ಜಿ. ಗೋಧಿ, ತಲಾ ಒಂದು ಕೆ.ಜಿ. ಬೇಳೆ, ಸಕ್ಕರೆ, ಅವಲಕ್ಕಿ, ತೊಗರಿಬೇಳೆ, ಕಡಲೆಬೇಳೆ, ರವೆ, ಬೆಲ್ಲ, 250 ಗ್ರಾಂ. ಟೀ ಪೌಡರ್, 100 ಗ್ರಾಂ. ಸಾಂಬರ್ ಪದಾರ್ಥ, 100 ಗ್ರಾಂ. ಖಾರದ ಪುಡಿ, 180 ಗ್ರಾಂ.ನ 2 ಬಿಸ್ಕೆಟ್ ಪಾಕೆಟ್ಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡುತ್ತಿದ್ದಾರೆ. ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಮೂಲಕ ಕ್ಷೇತ್ರದಾದ್ಯಂತ ಜನರಿಗೆ ತಲುಪಿಸುತ್ತಿದ್ದಾರೆ. ಈಗಾಗಲೇ ನೂರಾರು ಮಂದಿ ಇದರಿಂದ ಅನುಕೂಲ ಪಡೆದಿದ್ದಾರೆ.
‘ಕೊರೊನಾ ವೈರಸ್ ಹರಡದಂತೆ ನೋಡಿಕೊಳ್ಳಲು ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ವೇಳೆ ಕ್ಷೇತ್ರದ ಜನರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಬಡವರು, ಕೃಷಿ ಕೂಲಿಕಾರರಿಗೆ ನೆರವಾಗುತ್ತಿದ್ದೇನೆ. ಸತ್ಯ ಸಂಗಮ ಸೇವಾ ಟ್ರಸ್ಟ್ ಮೂಲಕ ಸಹಾಯ ಮಾಡುತ್ತಿದ್ದೇನೆ’ ಎಂದು ಸವದಿ ತಿಳಿಸಿದರು.
‘ಎ.ಪಿ.ಎಲ್., ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರಿಗೆ, ರೇಷನ್ ಕಾರ್ಡು ಇಲ್ಲದೆ ಇರುವವರನ್ನೂ ಒಳಗೊಂಡಂತೆ ಎಲ್ಲ ಕೂಲಿ ಕಾರ್ಮಿಕರು ಹಾಗೂ ವಲಸಿಗರಿಗೆ ಸೇರಿದಂತೆ ಒಟ್ಟು 70ಸಾವಿರ ಕುಟುಂಬಗಳ ಎರಡೂವರೆ ಲಕ್ಷ ಜನರಿಗೆ ಉಚಿತವಾಗಿ ನೀಡಲಾಗುವುದು’ ಎಂದರು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಮುಖಂಡರಾದ ಅರವಿಂದರಾವ ದೇಶಪಾಂಡೆ, ಚಿದಾನಂದ ಸವದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.