ಬಸನಗೌಡ ಪಾಟೀಲ ಯತ್ನಾಳ
ಹಾರೂಗೇರಿ: ‘ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ರಾಯಬಾಗ ತಾಲ್ಲೂಕಿನ ಹಾರೂಗೇರಿಯಲ್ಲಿ ಶನಿವಾರ ನಡೆದ ಮೀಸಲಾತಿಗಾಗಿ ‘ಪ್ರತಿಜ್ಞಾ ಕ್ರಾಂತಿ’ ಹೋರಾಟದಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದಿಂದ ಮೀಸಲಾತಿ ಸಿಗುವ ಭರವಸೆ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಅಡೆ–ತಡೆ ಮೀರಿ ಹೋರಾಟ ಮಾಡಬೇಕಿದೆ’ ಎಂದರು.
‘ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಜಾತಿಗಣತಿ ಮಾಡುತ್ತಿದ್ದಾರೆ’ ಎಂದು ದೂರಿದರು.
ನೇತೃತ್ವ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ, ‘ಮೀಸಲಾತಿಗಾಗಿ ಎಂಟನೇ ಹಂತದ ಹೋರಾಟಕ್ಕೆ ಇಲ್ಲಿಂದ ಚಾಲನೆ ಕೊಡಲಾಗಿದೆ. ಇಷ್ಟು ವರ್ಷ ಶಾಂತತೆಯಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಕ್ರಾಂತಿಯಿಂದ ಹೋರಾಟ ಮಾಡಲು ಸಂಕಲ್ಪ ತೊಟ್ಟಿದ್ದೇವೆ’ ಎಂದು ಹೇಳಿದರು.
ಶಾಸಕ ಸಿದ್ದು ಸವದಿ, ‘ಮೀಸಲಾತಿ ಹೋರಾಟ ಮಾಡುವ ಸಂದರ್ಭ, ಪೊಲೀಸರಿಂದ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು. ಮುಖಂಡರಾದ ಮಹಾಂತೇಶ ಕಡಾಡಿ, ಶಶಿಕಾಂತ ಪಡಸಲಗಿ, ಈರನಗೌಡ ಪಾಟೀಲ, ಬಸನಗೌಡ ಆಸಂಗಿ, ಸುನೀಲಗೌಡ ಪಾಟೀಲ, ಹನುಮಂತ ಯಲಶೆಟ್ಟಿ, ಸೋಮು ಹೊರಟ್ಟಿ, ಬಸವರಾಜ ಆಜೂರ ವೇದಿಕೆ ಮೇಲಿದ್ದರು.
ಹಾರೂಗೇರಿ ಕ್ರಾಸ್ನ ಬಸವೇಶ್ವರ ವೃತ್ತಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೂಜೆ ಸಲ್ಲಿಸಿದರು. ನಂತರ ‘ಜೈ ಪಂಚಮಸಾಲಿ’ ಎಂಬ ಜಯಘೋಷದೊಂದಿಗೆ ಬೈಕ್ ರ್ಯಾಲಿ ಲೀಲಾಮಠದವರೆಗೆ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.