ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಕಳೆದ ನಾಲ್ಕು ದಿನಗಳಿಂದ ಮಳೆ ಬಿಡುವು ನೀಡಿದೆ. ಅಲ್ಲದೇ, ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲೂ ತೀವ್ರತೆ ಕಡಿಮೆಯಾಗಿದೆ. ಇದರಿಂದಾಗಿ ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ನೀರಿನ ಹರಿವು ಕಡಿಮೆಯಾಗಿದೆ. ಮುಳುಗಡೆಯಾಗಿದ್ದ ಎಲ್ಲ ಕಿರು ಸೇತುವೆಗಳೂ ಸಂಚಾರಕ್ಕೆ ತೆರೆದುಕೊಂಡಿವೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ 56,333 ಕ್ಯುಸೆಕ್, ದೂಧಗಂಗಾ ನದಿಯಿಂದ 10,560 ಕ್ಯುಸೆಕ್ ಸೇರಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಸೇತುವೆ ಬಳಿ ಕೃಷ್ಣಾ ನದಿಗೆ 66,893 ಕ್ಯುಸೆಕ್ ನೀರು ಹರಿದುಬರುತ್ತಿದೆ. ನಾಲ್ಕು ದಿನಗಳ ಹಿಂದೆ 1.29 ಲಕ್ಷ ಕ್ಯುಸೆಕ್ನಷ್ಟು ನೀರು ಹರಿಯುತ್ತಿತ್ತು.
ಇದರಿಂದ ಚಿಕ್ಕೋಡಿ ತಾಲ್ಲೂಕು, ಖಾನಾಪುರ ಹಾಗೂ ಗೋಕಾಕ ತಾಲ್ಲೂಕಿನಲ್ಲಿ ಕೂಡ ಜಲಾವೃತಗೊಂಡಿದ್ದ 34 ಸೇತುವೆಗಳು ಸಂಚಾರ ಮುಕ್ತವಾಯಿತು.
ನಿಪ್ಪಾಣಿ ವರದಿ: ತಾಲ್ಲೂಕಿನಲ್ಲಿ ಜಲಾವೃತವಾಗಿದ್ದ ಎಲ್ಲ ಸೇತುವೆಗಳು ಗುರುವಾರದಿಂದ ಸಂಚಾರಕ್ಕೆ ಮುಕ್ತಗೊಂಡಿವೆ. ವೇದಗಂಗಾ ಮತ್ತು ದೂಧಗಂಗಾ ನದಿಗಳಿಗೆ ನಿರ್ಮಿಸಿದ ಭೋಜ- ಕಾರದಗಾ, ಭೋಜವಾಡಿ- ಕುನ್ನೂರ, ಅಕ್ಕೋಳ- ಸಿದ್ನಾಳ, ಜತ್ರಾಟ- ಭಿವಶಿ, ಮಮದಾಪೂರ- ಹುನ್ನರಗಿ, ಕುನ್ನೂರ- ಬಾರವಾಡ ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.