ADVERTISEMENT

ನೀರಾವರಿಗಾಗಿ ₹ 948 ಕೋಟಿ: ಕುಮಠಳ್ಳಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 15:29 IST
Last Updated 19 ಜನವರಿ 2021, 15:29 IST
ತೆಲಸಂಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿದರು
ತೆಲಸಂಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿದರು   

ತೆಲಸಂಗ: ‘ಈ ಭಾಗದ ಬಹುದಿನದ ಬೇಡಿಕೆಯಾಗಿದ್ದ ನೀರಾವರಿಗಾಗಿ ₹ 948 ಕೋಟಿ ತಂದಿದ್ದು, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ನಾನು ಸೇರಿಕೊಂಡು ಕ್ಷೇತ್ರವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತೇವೆ’ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ತಿಳಿಸಿದರು.

ಗ್ರಾಮದಲ್ಲಿ ಮಂಗಳವಾರ ₹ 22 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ವಸತಿ ಶಾಲೆ ಮತ್ತು ₹ 50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಲ್ಲಿ ರಸ್ತೆಗಳ ನಿರ್ಮಾಣ ಕೈಗೊಳ್ಳಲಾಗಿದೆ. ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು’ ಎಂದರು.

ADVERTISEMENT

‘ವಸತಿನಿಲಯದ ಕಟ್ಟಡಗಳನ್ನು ಖಾಲಿ ಜಾಗವಿದೆ ಎಂದು ಎಲ್ಲೆಂದರಲ್ಲಿ ನಿರ್ಮಿಸಬಾರದು. ದೂರಾಲೋಚನೆ ಇಲ್ಲದೆ ಕೆಲಸ ಮಾಡಿದರೆ ಮುಂದೆ ನಿರ್ಮಿಸಬೇಕಾದ ಕಟ್ಟಡಗಳಿಗೆ ಅಡಚಣೆ ಆಗುತ್ತದೆ. ಜವಾಬ್ದಾರಿಯಿಂದ ಉತ್ತಮ ಕಟ್ಟಡ ನಿರ್ಮಿಸಬೇಕು’ ಎಂದು ಸೂಚಿಸಿದರು.

ಮುಖಂಡ ವಿವೇಕಾನಂದ ಹಳಿಂಗಳಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಗುರಪ್ಪ ದಾಶ್ಯಾಳ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಎಇ ಗೌಡಪ್ಪ ಗೂಳಪ್ಪನವರ, ಎ.ಜಿ. ಮುಲ್ಲಾ ಇದ್ದರು.

ಕಾರ್ಯಕ್ರಮಕ್ಕೆಂದು ಹಾಕಿದ್ದ ಪೆಂಡಾಲ್, ಶಾಸಕರು ಬರುವುದಕ್ಕೆ 10 ನಿಮಿಷ ಮುಂಚೆ ಕುಸಿದು ಬಿದ್ದಿತು. ನಂತರ ಸರಿಪಡಿಸಲಾಯಿತು. ಮುಂಜಾಗ್ರತೆ ವಹಿಸದ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳ ಬಗ್ಗೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.