ADVERTISEMENT

ಸಂಗೊಳ್ಳಿ ರಾಯಣ್ಣ‌ ಉತ್ಸವ ಜ.12ರಿಂದ: ಶಾಸಕ ಮಹಾಂತೇಶ ಕೌಜಲಗಿಯಿಂದ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 3:26 IST
Last Updated 27 ಡಿಸೆಂಬರ್ 2025, 3:26 IST
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಶುಕ್ರವಾರ, ಸಂಗೊಳ್ಳಿ ರಾಯಣ್ಣನ ಉತ್ಸವ ಕುರಿತು ಶಾಸಕ ಮಹಾಂತೇಶ ಕೌಜಲಗಿ ಚರ್ಚೆ ಮಾಡಿದರು
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಶುಕ್ರವಾರ, ಸಂಗೊಳ್ಳಿ ರಾಯಣ್ಣನ ಉತ್ಸವ ಕುರಿತು ಶಾಸಕ ಮಹಾಂತೇಶ ಕೌಜಲಗಿ ಚರ್ಚೆ ಮಾಡಿದರು   

ಬೆಳಗಾವಿ: ‘ಈ ಬಾರಿಯೂ 2026ರ ಜ.12 ಹಾಗೂ 13ರಂದು ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು’ ಎಂದು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ ಹೇಳಿದರು.

ಸಂಗೊಳ್ಳಿ ಗ್ರಾಮದ ಸ್ಮಾರಕ ‌ಭವನದಲ್ಲಿ ಶುಕ್ರವಾರ ಜರುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ–2026ರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ರಾಯಣ್ಣನ ಇತಿಹಾಸವನ್ನು ವಿಶ್ವಕ್ಕೆ ತಿಳಿಸುವ ಕಾರ್ಯ ಸರ್ಕಾರದಿಂದ ಮಾಡಲಾಗುತ್ತಿದೆ. ಜ. 12 ಹಾಗೂ 13 ರಂದು ಎರಡು ದಿನಗಳ ಕಾಲ ಜರುಗಲಿರುವ ಉತ್ಸವದ ಉದ್ಘಾಟನಾ‌ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಭಾಗಿಯಾಗಬೇಕು’ ಎಂದರು.

ADVERTISEMENT

‘ಮೆರವಣಿಗೆಯಲ್ಲಿ ಉತ್ತಮ ಜಾನಪದ ಕಲಾ–ತಂಡಗಳನ್ನು ಆಯ್ಕೆ ಮಾಡಲಾಗುವುದು. ಈ ಬಾರಿ ಕುಸ್ತಿ ಪಂದ್ಯಾವಳಿಗಳ ಜೊತೆಗೆ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ತಡರಾತ್ರಿವರೆಗೆ ಅಂಗಡಿ‌ ಮುಂಗಟ್ಟು ತೆರೆದಿಡಲು ಸೂಚನೆ ನೀಡಲಾಗುವುದು. ಉತ್ಸವದ ಅಂಗವಾಗಿ ಮದ್ಯ ಮಾರಾಟ ನಿಷೇಧಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ‌ ಪಾಲ್ಗೊಳ್ಳುವ ಶಾಲೆಗಳ ವಿವರವನ್ನು ಶಾಲಾ ಶಿಕ್ಷಣ ಇಲಾಖೆಗೆ ಒದಗಿಸಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ‘ಎರಡು ದಿನ ಜರುಗಲಿರುವ ರಾಯಣ್ಣನ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗುವುದು. ಈ ಉತ್ಸವ ಯಶಸ್ವಿಯಾಗಬೇಕಾದರೆ ಗ್ರಾಮಸ್ಥರ ಸಹಕಾರ ಅಗತ್ಯ. ಈ ಬಾರಿಯೂ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಗುವುದು. ಕಲಾತಂಡಗಳ ಆಯ್ಕೆಗೆ ಸಂಬಂಧಿಸಿದಂತೆ, ಉಪಸಮಿತಿಯ ಸದಸ್ಯರು, ಗ್ರಾಮದ ಮುಖಂಡರು ಗಳೊಂದಿಗೆ ಚರ್ಚಿಸಿ ಉತ್ತಮ ಕಲಾ ತಂಡಗಳ ಆಯ್ಕೆ ಮಾಡಬೇಕು. ವಿಚಾರ ಸಂಕೀರಣ ಆಯೋಜನೆಗೆ ಸಂಬಂಧಿಸಿದಂತೆ ವಿಷಯಗಳ ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪಟ್ಟಿ ನೀಡುವಂತೆ’ ತಿಳಿಸಿದರು.

ಗ್ರಾಮ‌ ಪಂಚಾಯಿತಿ ಅಧ್ಯಕ್ಷೆ ರೂಪಾ ಚಚಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಬೈಲಹೊಂಗಲ್ ತಾಲ್ಲೂಕು ಅಧ್ಯಕ್ಷ ಮಹಾಂತೇಶ ಕಳ್ಳಿಬಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಬೈಲಹೊಂಗಲ ಡಿ.ವೈ.ಎಸ್.ಪಿ ವೀರಯ್ಯ ಹಿರೇಮಠ, ತಹಶೀಲ್ದಾರ ಹನುಂಮತ ಶಿರಹಟ್ಟಿ, ಕಲಗೌಡ ಪಾಟೀಲ ಇದ್ದರು.

ಸಂಗೊಳ್ಳಿ ರಾಯಣ್ಣನ ಉತ್ಸವದ ಯಶಸ್ವಿಗಾಗಿ ಉಪ ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಲ್ಲಿ ಅಧಿಕಾರಿಗಳ ಜೊತೆ ಗ್ರಾಮಸ್ಥರನ್ನು ನೇಮಿಸಲಾಗುವುದು
ಮೊಹಮ್ಮದ್‌ ರೋಷನ್‌ ಜಿಲ್ಲಾಧಿಕಾರಿ

ಗ್ರಾಮಸ್ಥರ ಒತ್ತಾಯಗಳೇನು?

ಉತ್ಸವ ಉಸಮಿತಿಗಳಿಗೆ ಸಂಗೊಳ್ಳಿ ಗ್ರಾಮದ ಕನಿಷ್ಠ ನಾಲ್ಕು ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಬೇಕು. ಉತ್ಸವ‌ ಮೂರು ದಿನ ಜರುಗಬೇಕು. ಉತ್ಸವದ ಉದ್ಘಾಟನೆಗೆ ಎಲ್ಲ‌ ಜನಪ್ರತಿನಿಧಿಗಳು ಹಾಜರಾಗಬೇಕು. ರಾಯಣ್ಣನ ಜ್ಯೋತಿ ರಾಜ್ಯದಾದ್ಯಂತ‌ ಸಂಚರಿಸಬೇಕು ಎಂಬ ಬೇಡಿಕೆಯನ್ನು ಗ್ರಾಮಸ್ಥರು ಮಂಡಿಸಿದರು. ಉತ್ಸವದ ಅಂಗವಾಗಿ ಗ್ರಾಮವನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿ ಆಯೋಜನೆ ಮೆರವಣಿಗೆಯಲ್ಲಿ‌ ಪಾಲ್ಗೊಳ್ಳುವ ಕಲಾ ತಂಡಗಳು ಕೊನೆಯ ವರೆಗೂ ಮೆರವಣಿಗೆ ಜೊತೆ ಸಾಗಬೇಕು ಎಂದೂ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.