ADVERTISEMENT

ಬೆಳಗಾವಿ: ಕಾರ್ಮಿಕ ಮಹಿಳೆ ಸವಿತಾ ಕಾಂಬಳೆ ಮೇಯರ್‌, ಆನಂದ ಚವ್ಹಾಣ ಉಪಮೇಯರ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 12:31 IST
Last Updated 15 ಫೆಬ್ರುವರಿ 2024, 12:31 IST
<div class="paragraphs"><p>ಬೆಳಗಾವಿ ಮೇಯರ್‌ ಆಗಿ ಸವಿತಾ ಕಾಂಬಳೆ ಹಾಗೂ ಉಪಮೇಯರ್‌ ಆಗಿ ಆನಂದ ಚವ್ಹಾಣ ಗುರುವಾರ ಆಯ್ಕೆಯಾದರು </p></div>

ಬೆಳಗಾವಿ ಮೇಯರ್‌ ಆಗಿ ಸವಿತಾ ಕಾಂಬಳೆ ಹಾಗೂ ಉಪಮೇಯರ್‌ ಆಗಿ ಆನಂದ ಚವ್ಹಾಣ ಗುರುವಾರ ಆಯ್ಕೆಯಾದರು

   

– ಪ್ರಜಾವಾಣಿ ಚಿತ್ರ

ಬೆಳಗಾವಿ: ಬೆಳಗಾವಿಯ 22ನೇ ಅವಧಿಯ ಮೇಯರ್‌ ಆಗಿ, ಕಾರ್ಮಿಕ ಮಹಿಳೆ ಸವಿತಾ ಕಾಂಬಳೆ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಉಪಮೇಯರ್‌ಗೆ ನಡೆದ ಚುನಾವಣೆಯಲ್ಲಿ ಆನಂದ ಚವ್ಹಾಣ 19 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ADVERTISEMENT

ಈ ಬಾರಿಯ ಮೇಯರ್‌ ಹುದ್ದೆಗೆ ಪರಿಶಿಷ್ಟ ಜಾತಿ (ಮಹಿಳೆ) ಮೀಸಲಾತಿ ಬಂದಿತ್ತು. ಆಡಳಿತಾರೂಢ ಬಿಜೆಪಿಯಲ್ಲಿ 17ನೇ ವಾರ್ಡಿನ ಸದಸ್ಯೆ ಸವಿತಾ ಕಾಂಬಳೆ ಹಾಗೂ 35ನೇ ವಾರ್ಡಿನ ಲಕ್ಷ್ಮಿ ರಾಠೋಡ ನಾಮಪತ್ರ ಸಲ್ಲಿಸಿದ್ದರು. 10 ಸದಸ್ಯ ಬಲ ಹೊಂದಿದ ಕಾಂಗ್ರೆಸ್‌ನಲ್ಲಿ ಯಾರೊಬ್ಬರೂ ಸ್ಪರ್ಧೆಗೆ ಅರ್ಹತೆ ಹೊಂದಿರಲಿಲ್ಲ.

ಶಾಸಕ ಅಭಯ ಪಾಟೀಲ, ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಮುರುಗೇಶ ನಿರಾಣಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ ನೇತೃತ್ವದಲ್ಲಿ ಎಲ್ಲ ಸದಸ್ಯರು ಬೆಳಿಗ್ಗೆ ಗೋಪ್ಯ ಸಭೆ ನಡೆಸಿದರು. ಸವಿತಾ ಅವರನ್ನು ಒಮ್ಮತದಿಂದ ಆಯ್ಕೆ ಮಾಡುವ ನಿರ್ಧಾರ ಕೈಗೊಂಡರು. ಚುನಾವಣೆ ಕಾಲಕ್ಕೆ ಲಕ್ಷ್ಮಿ ರಾಠೋಡ ತಮ್ಮ ಉಮೇದುವಾರಿಕೆ ಹಿಂಪಡೆದರು. ಇದರಿಂದ ಸವಿತಾ ವಿರೋಧ ಆಯ್ಕೆಯಾದರು.

ರಾಯಬಾಗ ಮೂಲದ ಸವಿತಾ ಅವರು ಬೆಳಗಾವಿಯ ಸರ್ದಾರ್‌ ಕಾಲೇಜಿನಲ್ಲಿ ಜೆಒಸಿ ಶಿಕ್ಷಣ ಪಡೆದಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಪೌರಕಾರ್ಮಿಕರ ಸುಪರ್‌ವೈಸರ್‌ ಆಗಿ ಕೆಲಸ ಮಾಡಿದ್ದಾರೆ. ನಂತರ ಊದುಬತ್ತಿ ಕಾರ್ಖಾನೆ ಹಾಗೂ ಹೆಲ್ಮೆಟ್‌ ತಯಾರಿಕಾ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದರು. 2021ರಲ್ಲಿ ಚುನಾವಣೆಗೆ ನಿಂತು ಮೊದಲಬಾರಿಗೆ ಪಾಲಿಕೆ ಪ್ರವೇಶಿಸಿದ್ದಾರೆ.

ನಿರಾಯಾಸದ ಗೆಲುವು: ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಮೇಯರ್‌ ಹುದ್ದೆಗೆ ಬಿಜೆಪಿಯಿಂದ ಆನಂದ ಚವ್ಹಾಣ ಹಾಗೂ ಕಾಂಗ್ರೆಸ್‌ನಿಂದ ಜ್ಯೋತಿ ಕಡೋಲ್ಕರ್‌ ನಡುವೆ ಸ್ಪರ್ಧೆ ನಡೆಯಿತು. 39 ಮತ ಪಡೆದ ಆನಂದ ಉಪಮೇಯರ್‌ ಆಗಿ ಆಯ್ಕೆಯಾದರು. ಜ್ಯೋತಿ 20 ಮತ ಪಡೆದರು.

58 ಸದಸ್ಯ ಬಲ ಹೊಂದಿದ ಪಾಲಿಕೆಯಲ್ಲಿ ಬಿಜೆಪಿ 35 ಸದಸ್ಯರೊಂದಿಗೆ ಅಧಿಕಾರ ಹೊಂದಿದೆ. ಕಾಂಗ್ರೆಸ್‌ 10, ಪಕ್ಷೇತರ 9, ಎಂಇಎಸ್‌ 3, ಎಐಎಂಐಎಂ 1 ಸದಸ್ಯರನ್ನು ಹೊಂದಿವೆ.

ಕನ್ನಡ + ಮರಾಠಿ ಬಿಜೆಪಿ ತಂತ್ರ

ಈ ಬಾರಿ ಕನ್ನಡಿಗರಿಗೆ ಮೇಯರ್‌ ಹಾಗೂ ಮರಾಠಿಗರಿಗೆ ಉಪಮೇಯರ್‌ ಸ್ಥಾನಗಳನ್ನು ಹಂಚಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಗ ಮತದಾರರನ್ನು ಸೆಳೆಯುವ ತಂತ್ರ ಬಿಜೆಪಿ ನಾಯಕರದ್ದು.

ಬೆಳಗಾವಿ, ಖಾನಾಪುರ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ ತಾಲ್ಲೂಕುಗಳಲ್ಲಿ ಮರಾಠಿ ಭಾಷಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಲಿಕೆ ಚುನಾವಣೆ ಕೂಡ ಈ ಮತದಾರರ ಮೇಲೆ ನೇೆರ ಪರಿಣಾಮ ಬೀರುತ್ತದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಬೆಳಗಾವಿ ಮೇಯರ್‌ ಆದ ಬಳಿಕ ಮನೆಗೆ ಮರಳಿದ ಸವಿತಾ ಕಾಂಬಳೆ ಅವರನ್ನು, ಅವರ ಒಡನಾಡಿ ಪೌರಕಾರ್ಮಿಕ ಮಹಿಳೆಯರು ಸ್ವಾಗತಿಸಿ ಸಂಭ್ರಮಿಸಿದ್ದು ಹೀಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.