ಅಥಣಿ (ಬೆಳಗಾವಿ ಜಿಲ್ಲೆ): ‘ತಾಲ್ಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಮಾದಿಗರ ಮೇಲೆ ಸವರ್ಣೀಯರಿಂದ ಆಗುತ್ತಿರುವ ದೌರ್ಜನ್ಯ ತಡೆಯಬೇಕು’ ಎಂದು ಆಗ್ರಹಿಸಿ ಮಾದಿಗ ಮಿಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಐಹೊಳೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು.
ಇಲ್ಲಿನ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
‘ಆ ಗ್ರಾಮದಲ್ಲಿ ಜಮಿನ್ದಾರಕಿ ಮತ್ತು ಸಾಹುಕಾರಕಿ ಪದ್ಧತಿ ಇರುವುದರಿಂದ ಮೂದಲಿನಿಂದಲು ಮಾದಿಗ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ದೌರ್ಜನ್ಯಕ್ಕೆ ಒಳಗಾದವರು ಭಯದಿಂದ ನೋವು ನುಂಗಿಕೊಂಡು ಇದ್ದಾರೆ. ಪೊಲೀಸ್ ಇಲಾಖೆಯಿಂದ ಸಮುದಾಯದವರಿಗೆ ರಕ್ಷಣೆ ನೀಡಬೇಕು’ ಎಂದು ಕೋರಿದರು.
‘ಕೃಷ್ಣಾ ಪ್ರವಾಹಕ್ಕೆ ಒಳಗಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಆಡಳಿತ ವಿಫಲವಾಗಿದೆ. ಕೂಡಲೇ ಶಾಶ್ವತ ಪುನರ್ವಸತಿ ಕಲ್ಲಿಸಬೇಕು. ಸ್ಮಶಾನ ಜಾಗಗಳು ಅತಿಕ್ರಮಣ ಆಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಸುನೀತಾ ಐಹೊಳೆ ಮಾತನಾಡಿದರು.
ಡಿವೈಎಸ್ಪಿ ಎಸ್.ವಿ. ಗಿರೀಶ ಮಾತನಾಡಿ, ‘ದೌರ್ಜನ್ಯ ಎಸಗಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದರು.
ಸಿಪಿಐ ಶಂಕರಗೌಡ ಬಸನಗೌಡರ, ಪಿಎಸ್ಐ ಕುಮಾರ ಹಾಡಕಾರರ, ಪ್ರವೀಣ ಪಾಟೀಲ, ಮಾಹಾದೇವ ಬಿರಾದಾರ, ಸಂಜು ತಳವಳಕರ, ಪಾಂಡು ಐಹೊಳೆ, ಶಿವಾನಂದ ಸೌದಾಗರ, ಹನುಮಂತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.