ADVERTISEMENT

ಡಿಸಿಸಿ ಬ್ಯಾಂಕ್: ಸವದಿ-ಕತ್ತಿ ಸಹೋದರರು, ಜೊಲ್ಲೆ ಗೋಪ್ಯ ಸಭೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 13:37 IST
Last Updated 12 ನವೆಂಬರ್ 2020, 13:37 IST

ಅಥಣಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ) ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನ.14ರಂದು ನಡೆಯಲಿದ್ದು, ಗದ್ದುಗೆಗಾಗಿ ನಿರ್ದೇಶಕರ ಮಧ್ಯೆ ಕಸರತ್ತು ತೀವ್ರಗೊಂಡಿವೆ.

ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಉಮೇಶ ಕತ್ತಿ, ಬಿಡಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಮೇಶ ಕತ್ತಿ ಹಾಗೂ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಸಾಬ ಜೋಲ್ಲೆ ಮೊದಲಾದವರು ಗುರುವಾರ ಗೋಪ್ಯವಾಗಿ ಚರ್ಚಿಸಿದರು. ಈ ಸಭೆ ಜಿಲ್ಲಾ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಈ ಸಲವೂ ರಮೇಶ ಕತ್ತಿ ಕಣ್ಣಿಟ್ಟಿದ್ದಾರೆ. ಈ ಕಾರಣಕ್ಕೆ ಸಹೋದರ ಉಮೇಶ ಕತ್ತಿ ಮೇಲೆ ಒತ್ತಡ ಹೇರುತ್ತಿರುವ ಅವರು, ಹುದ್ದೆಯಲ್ಲಿ ಮುಂದುವರೆಯಲು ಕಸರತ್ತು ಆರಂಭಿಸಿದ್ದಾರೆ. ಈ ಕಾರಣದಿಂದ ನಡೆದ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ನ ಹಲವು ನಿರ್ದೇಶಕರು ಭಾಗಿಯಾಗಿದ್ದರು.

ADVERTISEMENT

ಇನ್ನೊಂದೆಡೆ, ಸವದಿ ತಮ್ಮ ತಮ್ಮ ಕಿತ್ತೂರು ಶಾಸಕ ಮಹಾಂತೇಶ ದೊಡ್ಡನಗೌಡರ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

16 ನಿರ್ದೇಶಕ ಸ್ಥಾನ ಹೊಂದಿರುವ ಡಿಸಿಸಿ ಬ್ಯಾಂಕ್‌ನ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಉಳಿದ ಮೂರು ಸ್ಥಾನಗಳಿಗೆ ನ.6ರಂದು ಚುನಾವಣೆ ನಡೆದಿತ್ತು.

ಇನ್ನೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ‘ಮಾತಿನಂತೆ ರಮೇಶ ಕತ್ತಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.