
ಸವದತ್ತಿ: ರ್ಯಾಗಿಂಗ್ ಮತ್ತು ಜಾಲತಾಣಗಳಲ್ಲಿ ರವಾನಿಸುವ ಅಹಿತಕರ ಸಂದೇಶಗಳ ಅಪರಾಧಗಳಿಗೆ ಕಾನೂನಿನ ಅಡಿ ಮೂರು ವರ್ಷ ಹಾಗೂ ಜೀವಾವಧಿ ಶಿಕ್ಷೆ ವಿಧಿಸಬಹುದು ಎಂದು ಪ್ರಧಾನ ದಿವಾಣಿ ನ್ಯಾಯಾಧೀಶ ಸಿದ್ರಾಮರಡ್ಡಿ ಹೇಳಿದರು.
ಇಲ್ಲಿನ ಬೆಳ್ಳುಬ್ಬಿ ಕಾಲೇಜಿನಲ್ಲಿ ರ್ಯಾಗಿಂಗ್ ವಿರೋಧಿ ಘಟಕ, ಲೈಂಗಿಕ ಕಿರುಕುಳ ವಿರೋಧಿ ಘಟಕ, ತಾಲ್ಲೂಕು ಕಾನೂನು ಸೇವಾ ಘಟಕ, ವಕೀಲರ ಸಂಘ, ಜೇಂಟ್ಸ್ ಗ್ರೂಪ್ಗಳಿಂದ ಗುರುವಾರ ಜರುಗಿದ ರ್ಯಾಗಿಂಗ್ ಮತ್ತು ಕಾನೂನಾತ್ಮಕ ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಸಭ್ಯ ವರ್ತನೆ, ಹೀಯಾಳಿಸುವುದು, ಸಿಳ್ಳೆ ಹಾಕುವುದು, ಬಲವಂತದ ಕೆಲಸಕ್ಕೆ ಒತ್ತಾಯಿಸುವುದು ರ್ಯಾಗಿಂಗ್ ವ್ಯಾಪ್ತಿಗೆ ಒಳಪಡುತ್ತವೆ. ಸದ್ಯ ಸೈಬರ್ ಅಪರಾಧಗಳಲ್ಲಿ ಹೆಚ್ಚಳ ಕಂಡಿದೆ. ಆಯ್ದ ವ್ಯಕ್ತಿಗಳ ಭಾವಚಿತ್ರ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಇನ್ನೊಬ್ಬರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದು, ಅಸಭ್ಯವಾಗಿ ಸಂದೇಶ ಕಳಿಸುವುದು, ಮುದ್ರಿತ ಧ್ವನಿಯನ್ನು ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ನಲ್ಲಿ ಕಳಿಸುವುದು, ಇತರರನ್ನು ಮುಜುಗರಕ್ಕೀಡು ಮಾಡುವ ಚಟುವಟಿಕೆಯೂ ಕೂಡ ಅಪರಾಧವೇ ಆಗಿದೆ. ಕಾರಣ ವಿದ್ಯಾರ್ಥಿಗಳು ಭವಿಷ್ಯದ ಗುರಿಯ ಕಡೆ ಗಮನ ಹರಿಸಿ ಸತತ ಪರಿಶ್ರಮದಿಂದ ಅಭ್ಯಸಿಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ವಕೀಲ ಎಂ.ಬಿ. ದ್ಯಾಮನಗೌಡರ ಮಾತನಾಡಿದರು. ಡಾ.ಅರುಂಧತಿ ಬದಾಮಿ, ಪ್ರೊ.ಕೆ. ರಾಮರೆಡ್ಡಿ, ಜೆ.ಬಿ. ಮುನವಳ್ಳಿ, ಎಂ.ಎಂ. ಎಲಿಗಾರ, ನಾಗರಾಜ ಬೊನಗೇರಿ, ಆಸೀಫ್ ಜಂಗ್ಲಿಸಾಬನವರ, ಎ.ಎ. ಹಳ್ಳೂರ, ವಿ.ಎಸ್. ಮೀಶಿ, ಡಾ. ಎನ್.ಎ. ಕೌಜಗೇರಿ, ಎಮ್.ಸಿ. ಹಾದಿಮನಿ, ಬಿ.ಎಲ್. ರಾಯನಗೌಡರ, ಭಾಗ್ಯಶ್ರೀ ಪೋಲೇಶಿ, ಸಹನಾ ಬಾರ್ಕಿ, ಯಲ್ಲಮ್ಮ ಪಟ್ಟದಕಲ್ಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.