ADVERTISEMENT

ಹಿಂಡಲಗಾ ಗುಂಡಿನ ದಾಳಿಯ ಹಿಂದೆ ಯಾವುದೋ ಸಂಘಟನೆ ಕೈವಾಡವಿದೆ: ಮುತಾಲಿಕ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 12:35 IST
Last Updated 8 ಜನವರಿ 2023, 12:35 IST
ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ
ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ   

ಬೆಳಗಾವಿ: ‘ರವಿ ಕೋಕಿತ್ಕರ್ ಮೇಲೆ‌ ನಡೆದ ಗುಂಡಿನ ದಾಳಿ ಪ್ರಕರಣದ ಹಿಂದೆ ಯಾವುದೋ ಸಂಘಟನೆ ಕೈವಾಡವಿದೆ. ಚಲಿಸುತ್ತಿದ್ದ ವಾಹನದಲ್ಲಿದ್ದವರ ಮೇಲೆ ಗುಂಡು ಹಾರಿಸಲು ಶಾರ್ಪ್‌ ಶೂಟರ್‌ಗಳಿಗೆ ಮಾತ್ರ ಸಾಧ್ಯ. ಈ ಪ್ರಕರಣದಲ್ಲಿರುವ ಶಾರ್ಪ್‌ಶೂಟರ್ ಯಾರು ಎಂಬುದರ ಬಗ್ಗೆ ತನಿಖೆಯಾಗಬೇಕು’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಒತ್ತಾಯಿಸಿದರು.

ಇಲ್ಲಿ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‌‘ಆರೋಪಿಗಳು ನಾಲ್ಕೈದು ದಿನಗಳಿಂದ ರವಿ ಹಿಂಬಾಲಿಸಿದ್ದರು. ನಗರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವಿರಾಟ್‌ ಹಿಂದೂ ಸಮಾವೇಶಕ್ಕೆ ಅಡ್ಡಿಪಡಿಸಲು ಈ ರೀತಿ ಕೃತ್ಯವೆಸಗಿರುವ ಸಂಶಯವಿದೆ. ರವಿ ಕೋಕಿತ್ಕರ್‌ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದು, ಘಟನಾ ಸ್ಥಳಕ್ಕೂ ಹೋಗಿ ಬಂದಿದ್ದೇನೆ’ ಎಂದರು.

‘ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಭಿಜಿತ ಹಿಂದೆ ನಮ್ಮೊಂದಿಗೆ ಭಜರಂಗ ದಳದಲ್ಲಿದ್ದ. ಈ ಘಟನೆ ಹಿಂದೆ ಯಾವ ಸಂಘಟನೆ ಇದೆ ಎಂಬುದರ ಬಗ್ಗೆ ತನಿಖೆ ನಡೆಸಿ, ಪೊಲೀಸರು ಸತ್ಯಾಂಶ ಹೊರತೆಗೆಯಬೇಕು. ಇಲ್ಲದಿದ್ದರೆ ನಾವೇ ಹೊರತೆಗೆಯುತ್ತೇವೆ. ಈ ರೀತಿ ಗೂಂಡಾಗಿರಿ ಮುಂದೆ ನಡೆಯುವುದಿಲ್ಲ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.