b ರಾಯಬಾಗ ತಾಲ್ಲೂಕಿನ ಕಟಕಭಾವಿಯಲ್ಲಿ ಶ್ರವಣದೋಷವುಳ್ಳ ಜೋಡಿಯು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.
ಕಾಗವಾಡ ತಾಲ್ಲೂಕಿನ ಜೂಗೂಳದ ವಧು ಪೂಜಾ ವಸಂತ ಮಾಳಿ– ಕಟಕಭಾವಿ ಗ್ರಾಮದ ನಾಗರಾಜ ರಾಮಪ್ಪ ಮಾಳಿ ದಂಪತಿಯಾದವರು.
ಪೂಜಾ ತನ್ನ ನೂನ್ಯತೆ ಸವಾಲಾಗಿ ಸ್ವೀಕರಿಸಿ ನಿಪ್ಪಾಣಿ, ಸಾಂಗ್ಲಿ, ಲಾತೂರ ಮತ್ತು ಬೆಳಗಾವಿಯ ವಿಶೇಷ ಶಾಲೆಗಳಲ್ಲಿ ಶಿಕ್ಷಣ ಪಡೆದು ಚಿತ್ರಕಲೆ ಮತ್ತು ಕಸೂತಿ ಕಲೆಯಲ್ಲಿ ಪರಿಣತಿ ಪಡೆದಿದ್ದಾರೆ. ನಾಗರಾಜ ಬಾಲ್ಯದಲ್ಲಿ ತಂದೆ ಕಳೆದುಕೊಂಡು ತಾಯಿಯ ಆರೈಕೆಯಲ್ಲಿ ಬೆಳೆದವರು. ಅವರೂ ನೂನ್ಯತೆ ಮೀರಿ ಗೋಕಾಕ ಮತ್ತು ಲಕ್ಷೇಶ್ವರದ ವಿಶೇಷ ಶಾಲೆಗಳಲ್ಲಿ ತರಬೇತಿ ಪಡೆದಿದ್ದಾರೆ. ಡಿಪ್ಲೊಮಾ ಇನ್ ಮಕ್ಯಾನಿಕಲ್ ಓದಿ, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
ಈ ವಿಶೇಷ ಮದುವೆಗೆ ನಿಡಸೋಶಿಯ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾಕ್ಷಿಯಾಗಿ, ನವ ದಂಪತಿಯನ್ನು ಹರಸಿದರು. ಬೆಳಗಾವಿಯ ಶ್ರವಣದೋಷವುಳ್ಳ ಮಕ್ಕಳ ವಿಶೇಷ ಶಾಲೆಯ ಶಿಕ್ಷಕ ಶಂಕರಗೌಡ ಪಾಟೀಲ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜೆಡಿಎಸ್ ರಾಯಬಾಗ ಬ್ಲಾಕ್ ಅಧ್ಯಕ್ಷ ಸುರೇಶ ಐಹೊಳೆ, ಮುಖಂಡ ಸಿದಗೌಡ ಕಬಾಡಗಿ, ಅಶೋಕ ಮಾಳಿ, ಅಪ್ಪಾಸಾಹೇಬ ದೇಸಾಯಿ, ಉದಯ ದೇಸಾಯಿ, ಮಹಾವೀರ ಐತವಾಡೆ, ಮಹಾಂತೇಶ ಪಾಟೀಲ, ಎಸ್.ಜಿ. ಉಗಾರೆ, ಶಿವಲಿಂಗಪ್ಪ ಕವಣಿ, ಶಂಕರ ಮಗದುಮ್, ಶಿವಾನಂದ ಕಮತೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.