ADVERTISEMENT

2 ಗಂಟೆ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಜಿಂಕೆ!

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 15:10 IST
Last Updated 30 ಆಗಸ್ಟ್ 2019, 15:10 IST
ಅಪಘಾತದಲ್ಲಿ ಮೃತಪಟ್ಟ ಚುಕ್ಕೆ ಜಿಂಕೆ
ಅಪಘಾತದಲ್ಲಿ ಮೃತಪಟ್ಟ ಚುಕ್ಕೆ ಜಿಂಕೆ   

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿ ಸಮೀಪದ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಶುಕ್ರವಾರ ಸಂಜೆ 3 ವರ್ಷದ ಚುಕ್ಕೆ ಜಿಂಕೆಯು ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದೆ.

ಈ ಭಾಗದಲ್ಲಿ ಜಿಂಕೆಗಳ ಚಲನವಲನ ಸಾಮಾನ್ಯ. ಹೆದ್ದಾರಿ ಬದಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ಹೋಗಲು ಜಿಂಕೆ ಹೆದ್ದಾರಿ ದಾಟುತ್ತಿತ್ತು. ಅದಕ್ಕೆ ವಾಹನವೊಂದು ಜೋರಾಗಿ ಡಿಕ್ಕಿಯಾಗಿದೆ. ಆ ರಭಸದಿಂದಾಗಿ ಜಿಂಕೆಯು ರಸ್ತೆ ಪಕ್ಕಕ್ಕೆ ಬಿದ್ದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಿಂಕೆಯನ್ನು ಉಳಿಸಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ಅದಕ್ಕೆ ನೀರು ಕುಡಿಸಿದ್ದಾರೆ. ಕೆಲವರು ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದಾರೆ.

ಆದರೆ, 2 ಗಂಟೆಗಳ ಬಳಿಕವಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳು ಬಂದರು. ಅಲ್ಲಿವರೆಗೂ ವಿಲವಿಲನೆ ಒದ್ದಾಡಿ ಜಿಂಕೆ ಕೊನೆಯುಸಿರೆಳೆದಿದೆ. ಜಿಂಕೆ ಮೃತಪಟ್ಟ ಬಳಿಕ ಬಂದ ಅರಣ್ಯ ಇಲಾಖೆಯವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಸಕಾಲದಲ್ಲಿ ಬಂದಿದ್ದರೆ ಈ ಪ್ರಾಣಿಯನ್ನು ಉಳಿಸಿಕೊಳ್ಳಬಹುದಿತ್ತು ಎಂದು ಬಿಸಿ ಮುಟ್ಟಿಸಿದರು ಎಂದು ತಿಳಿದುಬಂದಿದೆ. ನಂತರ ಕಳೆಬರವನ್ನು ಅರಣ್ಯ ಇಲಾಖೆಯವರು ತೆಗೆದುಕೊಂಡು ಹೋದರು.

ADVERTISEMENT

ಕಾಕತಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಜಿಂಕೆಯು ಒದ್ದಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲೂ ಹಬ್ಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.