ಬೆಳಗಾವಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು 2ನೇ ದಿನವಾದ ಬುಧವಾರವೂ ಸುಗಮವಾಗಿ, ಯಾವುದೇ ಗೊಂದಲಗಳಿಲ್ಲದೆ ನಡೆದಿದೆ. ಡಿಬಾರ್ ಪ್ರಕರಣ ವರದಿಯಾಗಿಲ್ಲ.
ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ವಿಷಯ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 1,200 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಾಯಿಸಿದ್ದ 33,859 ವಿದ್ಯಾರ್ಥಿಗಳ ಪೈಕಿ 436 ಮಂದಿ ಪರೀಕ್ಷೆಗೆ ಬರಲಿಲ್ಲ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 44,796 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಅವರಲ್ಲಿ 764 ಮಂದಿ ಗೈರುಹಾಜರಾದರು.
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇಲ್ಲಿನ ಸರ್ದಾರ್ ಪ್ರೌಢಶಾಲೆಯಲ್ಲಿರುವ ಉರ್ದು ಮಾಧ್ಯಮದ ವಿದ್ಯಾರ್ಥಿನಿಯರಲ್ಲಿ ಕೆಲವರು ಹಿಬಾಜ್ ಧರಿಸಿ ಬಂದಿದ್ದರು. ಕೆಲವರು ಪರೀಕ್ಷಾ ಕೊಠಡಿಯನ್ನೂ ಪ್ರವೇಶಿಸಿದ್ದರು. ಶಿಕ್ಷಕರ ಸೂಚನೆ ಮೇರೆಗೆ, ಕೊಠಡಿಯೊಂದರಲ್ಲಿ ಹಿಬಾಜ್ ತೆಗೆದಿಟ್ಟು ನಂತರ ಪರೀಕ್ಷೆಗೆ ಹಾಜರಾದರು. ಪರೀಕ್ಷಾ ಅಕ್ರಮ ವರದಿಯಾಗಿಲ್ಲ ಎಂದು ಡಿಡಿಪಿಐಗಳು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.