ತಾಲೂಕಿನ ತೆಲಸಂಗ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬಿಗ್ ಬಜಾರ್ಗೆ ಹೊತ್ತಿಕೊಂಡ ಅಗ್ನಿ ನಂದಿಸುತ್ತಿರುವ ಅಗ್ನಿಶಾಮಕದಳದ ಸಿಬ್ಬಂದಿ.
ತೆಲಸಂಗ: ತಾಲ್ಲೂಕಿನ ತೆಲಸಂಗ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಿರೀಶ್ ಸಕ್ರಿ ಎಂಬುವರಿಗೆ ಸೇರಿದ ಬಿಗ್ ಬಜಾರ್ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಂಭವಿಸಿದ ಈ ದುರಂತದಲ್ಲಿ ₹20 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಹೇಳಲಾಗುತ್ತಿದೆ.
ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ವಿಷಯ ತಿಳಿದು ಅಥಣಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು, ಈ ಘಟನೆಯಿಂದ ಅಕ್ಕಪಕ್ಕದ ಕೆಲವು ಮನೆಗಳಿಗೂ ಅಲ್ಪ ಪ್ರಮಾಣದ ಹಾನಿಯಾಗಿದೆ,ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ ಅಗ್ನಿಶಾಮಕ ಸಿಬ್ಬಂದಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
ಈ ಅನಿರೀಕ್ಷಿತ ಘಟನೆಯಿಂದ ಗಿರೀಶ್ ಸಕ್ರಿ ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ, ಒಂದು ದಿನದ ಹಿಂದೆಯಷ್ಟೇ ತಮ್ಮ ತಾಯಿಯ ಅಂತ್ಯ ಸಂಸ್ಕಾರ ಮುಗಿಸಿದ್ದ ಗಿರೀಶ್ ಅವರಿಗೆ, ಅಂಗಡಿ ಸುಟ್ಟುಹೋದ ವಿಷಯ ಮತ್ತೊಂದು ಆಘಾತ ನೀಡಿದೆ,ಬಡತನದಿಂದ ಬಂದಿದ್ದ ಗಿರೀಶ್, ಅಡುಗೆ ಕೆಲಸ ಮಾಡಿ ಹಣ ಸಂಪಾದಿಸಿ, ಸಾಲ ಮಾಡಿ ಈ ಅಂಗಡಿಯನ್ನು ಪ್ರಾರಂಭಿಸಿದ್ದರು,ದುರಂತದ ಬಳಿಕ ತಮ್ಮ ಕಣ್ಣ ಮುಂದೆಯೇ ಸುಟ್ಟು ಬೂದಿಯಾದ ಅಂಗಡಿಯನ್ನು ನೋಡಿ ಗಿರೀಶ್ ಅವರ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ,ಈ ದೃಶ್ಯ ನೋಡುಗರ ಮನ ಕಲುಕುವಂತಿತ್ತು,ಗಿರೀಶ್ ಅವರ ದುಃಖಕ್ಕೆ ಇಡೀ ಗ್ರಾಮವೇ ಮರುಗಿದೆ. ಘಟಣಾ ಸ್ಥಳಕ್ಕೆ ಶಾಸಕ ಲಕ್ಷ್ಮಣ ಸವದಿ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.