ಬೆಳಗಾವಿ: ಮುಸುಕುಧಾರಿ ದರೋಡೆಕೋರರು, ಇಲ್ಲಿನ ಟಿಳಕವಾಡಿಯ 3ನೇ ರೈಲ್ವೆ ಗೇಟ್ ಬಳಿಯ ರಾಣಾಪ್ರತಾಪ ರಸ್ತೆಯ ಮನೆಯೊಂದರ ಕಿಟಕಿ ಮುರಿದು ಒಳ ನುಗ್ಗಿ ಮಾಲೀಕರಿಗೆ ಜೀವಬೆದರಿಕೆ ಒಡ್ಡಿ 35 ಗ್ರಾಂ. ಚಿನ್ನಾಭರಣ ದೋಚಿದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
ಅಭಿಜಿತ ಸಾವಂತ ಎನ್ನುವವರ ಮನೆಯಲ್ಲಿ ದರೋಡೆ ನಡೆದಿದೆ. ಏಳು ಜನ ದರೋಡೆಕೋರರು ಚಿನ್ನಾಭರಣ ದೋಚಿದ್ದಾರೆ. ಮಾಸ್ಕ್ ಧರಿಸಿದ್ದ ಅವರು ಕಿಟಕಿ ಮುರಿದು ಒಳ ನುಗ್ಗಿದ್ದರು. ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ದೂರು ನೀಡಲಾಗಿದೆ.
ಅಭಿಜಿತ ಸಾವಂತ ದಂಪತಿ ಮಾತ್ರ ಮನೆಯಲ್ಲಿದ್ದರು. ಒಳ ನುಗ್ಗುತ್ತಿದ್ದಂತೆಯೇ ಎಚ್ಚರಗೊಂಡ ದಂಪತಿಯನ್ನು ದರೋಡೆಕೋರರು ಹೆದರಿಸಿದ್ದಾರೆ. ಆಗ ಅಭಿಜಿತ ಒಬ್ಬನಿಗೆ ಒದ್ದು ತಪ್ಪಿಸಿಕೊಳ್ಳಲು ಯತ್ನಿಸಿ ಅವರೊಂದಿಗೆ ಗುದ್ದಾಡಿದ್ದಾರೆ. ಆದರೆ, ಮೂರ್ನಾಲ್ಕು ಮಂದಿ ಸೇರಿ ತಡೆದಿದ್ದಾರೆ. ಚಾಕು ತೋರಿಸಿ ಬೆಡ್ ರೂಂನಲ್ಲಿದ್ದ ಕಪಾಟಿನ ಕೀಲಿ ಕಸಿದುಕೊಂಡು ಚಿನ್ನಾಭರಣ ತೆಗೆದುಕೊಂಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಕೂಡಲೇ ಅಭಿಜಿತ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ಪಕ್ಕದ ಮನೆಯವರಿಗೆ ಶಬ್ದ ಕೇಳಿಸದಿರಲೆಂದು, ರೈಲು ಸಂಚರಿಸುವ ಸಂದರ್ಭವನ್ನು ದುಷ್ಕರ್ಮಿಗಳು ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಎಸಿಪಿ ಚಂದ್ರಪ್ಪ, ಉದ್ಯಮಬಾಗ ಠಾಣೆ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ದರೋಡೆಕೋರರು ತೆರಳಿರುವ ಮಾರ್ಗದ ಸಿಸಿ ಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದರೋಡೆಕೋರರ ಬಂಧನಕ್ಕೆ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.