ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮನೆಗೆ ಶುಕ್ರವಾರ ದಾಳಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ ಕಲ್ಲೋಳಿಕರ, ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ತೇಲಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ಮಾಡಿ, ಮೃಣಾಲ್ ಹೆಬ್ಬಾಳಕರ ಅವರನ್ನು ವಿಚಾರಣೆ ನಡೆಸಿತು.
ಸಚಿವೆ ಲಕ್ಷ್ಮೀ ಅವರ ಪುತ್ರ ಮೃಣಾಲ್ ಕೊರಳಲ್ಲಿ ಧರಿಸಿದ್ದ ಚಿನ್ನಾಭರಣದಲ್ಲಿ ಹುಲಿ ಉಗುರಿನ ಪೆಂಡೆಂಟ್ ಇತ್ತು. ಇದರ ಫೋಟೊ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ನೋಟಿಸ್ ನೀಡಿ, ದಾಳಿ ಮಾಡಿದರು.
'ನನ್ನ ಮದುವೆಯ ಸಮಾರಂಭದಲ್ಲಿ ಆತ್ಮೀಯರು ನನಗೆ ಈ ಪೆಂಡೆಂಟ್ ಕಾಣಿಕೆ ನೀಡಿದ್ದಾರೆ. ಇದು ನಿಜವಾದ ಹುಲಿ ಉಗುರಿನದ್ದಲ್ಲ. ಪ್ಲಾಸ್ಟಿಕ್ ನಿಂದ ಮಾಡಿದ್ದು. ಈ ವಿಚಾರವಾಗಿ ಅರಣ್ಯಾಧಿಕಾರಿಗಳ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ' ಎಂದು ಮೃಣಾಲ್ ಹೇಳಿದರು.
ಮಾಹಿತಿ ಕಲೆಹಾಕಿ, ಪೆಂಡೆಂಟ್ ವಶಕ್ಕೆ ಪಡೆದ ಅಧಿಕಾರಿಗಳು ಅದನ್ನು ಎಫ್.ಎಸ್.ಎಲ್.ಗೆ ಕಳುಹಿಸುವುದಾಗಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.