ಅಥಣಿ: ತಾಲ್ಲೂಕಿನ ಸವದಿ ಗ್ರಾಮದಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ 150 ಮಂದಿ ಸಿಲುಕಿದ್ದಾರೆ.
ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ತೆರಳಿದ್ದ ಎಸ್ಡಿಆರ್ಎಫ್, ಅಗ್ನಿಶಾಮಕ ದಳದ ಸಿಬ್ಬಂದಿ ಟ್ಯೂಬ್ ಬೋಟ್ ಪಂಕ್ಚರ್ ಆಗಿದ್ದರಿಂದ ಸ್ವತಃ ಸಂಕಷ್ಟಕ್ಕೆ ಒಳಗಾಗಿದ್ದರು. ಲೈಫ್ ಜಾಕೆಟ್ ಧರಿಸಿದ್ದರಿಂದ ಅವರು ಸುರಕ್ಷಿತವಾಗಿ ವಾಪಸಾದರು. ಆದರೆ, ಅಲ್ಲಿ ಉಳಿದಿರುವವರು ಪ್ರಾಣ ಉಳಿಸಿಕೊಳ್ಳಲು ಕೆಲವರು ಹುಣಸೆಮರದ ಮೇಲೆ ಕುಳಿತಿದ್ದಾರೆ ಎಂದು ತಿಳಿದುಬಂದಿದೆ.
ಟ್ಯೂಬ್ ಪಂಕ್ಚರ್ ಆಗಿದ್ದರಿಂದ, ಹಲವು ಗಂಟೆಗಳ ನಂತರ ಬೇರೆ ಊರಿನಿಂದ ಇನ್ನೊಂದು ದೋಣಿ ತಂದು ಕೆಲವರನ್ನು ಕರೆತರಲಾಯಿತು. ಪರಿಣಾಮ, ರಕ್ಷಣಾ ಕಾರ್ಯ ಆಮೆಗತಿಯಲ್ಲಿ ನಡೆಯಿತು.
ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ಬೋಟ್ಗಳನ್ನು ಸುಸಜ್ಜಿತವಾಗಿ ಇಡಲು ಮತ್ತು ಯಾಂತ್ರಿಕ ಬೋಟ್ಗಳನ್ನು ಒದಗಿಸಲು ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.