ಬೆಳಗಾವಿ: ಮನೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಇಲ್ಲಿನ ಶಹಾಪುರದ ಸರಸ್ವತಿ ನಗರದ ಪ್ರಕಾಶ ಪಾಟೀಲ ಮತ್ತು ಪಶ್ಚಿಮ ಬಂಗಾಳದ ಪರ್ಗಾನಸ್ ಜಿಲ್ಲೆಯ ಕಾಲಿತಲಾ ಗ್ರಾಮದ ನಿತೈ ಖಾಲಿಪದ ಮಂಡಲ ಬಂಧಿತರು. ಅವರಿಂದ ₹ 42.40 ಲಕ್ಷ ಮೌಲ್ಯದ 848 ಗ್ರಾಂ. ಚಿನ್ನಾಭರಣ, ₹ 8 ಲಕ್ಷ ಮೌಲ್ಯದ ಕಾರು, ಕಂಟ್ರಿ ಪಿಸ್ತೂಲ್, ಐದು ಜೀವಂತ ಗುಂಡುಗಳು ಮತ್ತು ಕಳವು ಮಾಡಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಮೌಲ್ಯ ₹ 51.60 ಲಕ್ಷ ಆಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಲ್ಲೂಕಿನ ಝಾಡಶಹಾಪುರ ಗ್ರಾಮದಲ್ಲಿ ಡಿ.6ರಂದು ಮನೆ ಕಳವು ಮಾಡುತ್ತಿದ್ದ ಕಾಲಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿ, ಅವರನ್ನು ಡಿ.8ರಂದು ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಗ್ರಾಮೀಣ, ಎಪಿಎಂಸಿ, ಕ್ಯಾಂಪ್, ಮಾರಿಹಾಳ ಹಾಗೂ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳಲ್ಲಿ ಕಳವು ಮಾಡಿದ್ದಾಗಿ ಅವರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ತನಿಖೆ ನಡೆದಿದೆ ಎಂದು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸುನೀಲಕುಮಾರ ನಂದೇಶ್ವರ, ಪಿಎಸ್ಐ ಆನಂದ ಅದಗೊಂಡ ಮತ್ತು ಸಿಎಚ್ಸಿ ಬಿ.ಎ. ಚೌಗಲಾ, ವೈ.ವೈ. ತಳೆವಾಡ, ಸಿ.ಎಂ. ಹುಣಚ್ಯಾಳ, ಎಂ.ಎಸ್. ಗಾಡವಿ, ಎಂ.ಎನ್. ಚಿಪ್ಪಲಕಟ್ಟಿ, ಬಿ.ವೈ. ಪೂಜಾರ, ಎಸ್.ಎಂ. ಲೋಕುರೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ತಂಡಕ್ಕೆ ನಗರ ಪೊಲೀಸ್ ಆಯುಕ್ತರು ನಗದು ಬಹುಮಾನ ಘೋಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.