ADVERTISEMENT

ಬೆಳಗಾವಿ: ಕೆರೆಯಲ್ಲಿ ಮುಳುಗಿ ಸಹೋದರಿಯರಿಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 14:21 IST
Last Updated 7 ನವೆಂಬರ್ 2021, 14:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ದೀಪಾವಳಿ ಹಬ್ಬದ ಅಂಗವಾಗಿ ನೆರವೇರಿಸಿದ ಲಕ್ಷ್ಮಿಪೂಜೆಗೆ ಬಳಸಿದ್ದ ಸಾಮಗ್ರಿಗಳನ್ನು ಕೆರೆಯಲ್ಲಿ ವಿಸರ್ಜಿಸಲು ಹೋಗಿದ್ದ ಮೂವರು ಸಹೋದರಿಯರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಅದೇ ಗ್ರಾಮದ ನೇತ್ರಾ ಕೊಳವಿ (8) ಹಾಗೂ ಪ್ರಿಯಾ ಕೊಳವಿ (6) ಮೃತರು. ಅಕ್ಕ ಸಂಧ್ಯಾ ಕೊಳವಿ (10) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೂಜಾ ಸಾಮಗ್ರಿಗಳನ್ನು ವಿಸರ್ಜಿಸುತ್ತಿದ್ದಾಗ ಮೂವರೂ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ. ಇದನ್ನು ನೋಡಿದ ಗ್ರಾಮ ಪಂಚಾಯ್ತಿ ಸದಸ್ಯ ಭುಜಂಗ ಗಿರಮಲ್ ಹಾಗೂ ಮುಖಂಡ ನಾಗೇಶ ದೇಸಾಯಿ ನೀರಿಗಿಳಿದು ಬಾಲಕಿಯರನ್ನು ಹೊರಗೆ ತಂದಿದ್ದಾರೆ. ಆ ವೇಳೆಗಾಗಲೇ ನೇತ್ರಾ ಮೃತಪಟ್ಟಿದ್ದಳು. ಪ್ರಿಯಾ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಈ ಬಾಲಕಿಯರ ತಂದೆ ಈರಣ್ಣ ಕೊಳವಿ ಮೂಲತಃ ಗೋಕಾಕ ತಾಲ್ಲೂಕಿನ ಯದ್ದಲಗುಡ್ಡದವರು. ಸಾಂಬ್ರಾದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಕಾರವಾರದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈರಣ್ಣ ರಜೆ ಮುಗಿಸಿ ವಾಪಸ್ ಹೋಗಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ. ಘಟನೆಯಿಂದ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.