ADVERTISEMENT

ಮತೀಯ ಗೂಂಡಾಗಿರಿ: ದಾಳಿಗೊಳಗಾಗಿದ್ದ ಕೋಳಿಯಂಗಡಿ ಮಾಲೀಕನಿಗೆ ದ್ವಿಚಕ್ರವಾಹನ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 10:46 IST
Last Updated 20 ಅಕ್ಟೋಬರ್ 2021, 10:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಹೊರವಲಯದ ಯಮನಾಪುರ ಗ್ರಾಮದಲ್ಲಿ ಕೋಳಿಮಾಂಸದ ಅಂಗಡಿ ಇಟ್ಟುಕೊಂಡಿರುವ ಹಸನ್‌ಸಾಬ್‌ ದ್ವಿಚಕ್ರವಾಹನದಲ್ಲಿ ಹೋಗುವಾಗ, ಮತ್ತೊಂದು ದ್ವಿಚಕ್ರವಾಹನ ಡಿಕ್ಕಿಯಾಗಿ ಗಾಯಗೊಂಡು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮೀಪದ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಕೋಳಿಮಾಂಸದ ಅಂಗಡಿ ತೆರೆದಿದ್ದ ಕಾರಣಕ್ಕೆ ಹಿಂದೂ ಯುವಕರ ಗುಂಪೊಂದು ಹಸನ್‌ ಅವರ ಅಂಗಡಿ ಮೇಲೆ ದಾಳಿ ಮಾಡಿ, ಬ್ಯಾನರ್‌ ಹರಿದುಹಾಕಿತ್ತು. ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಮಂಗಳವಾರ ರಾತ್ರಿ ಅಪಘಾತಕ್ಕೆ ಒಳಗಾಗಿದ್ದಾರೆ.

ಅವರು ನಗರದಿಂದ ಪತ್ನಿಯೊಂದಿಗೆ ಯಮನಾಪುರ ಕಡೆಗೆ ಹೋಗುವಾಗ ಶ್ರೀನಗರ ಉದ್ಯಾನದ ಬಳಿಯಲ್ಲಿ ಈ ಘಟನೆ ನಡೆದಿದೆ. ‘ದ್ವಿಚಕ್ರವಾಹನದಲ್ಲಿ ವೇಗವಾಗಿ ಬಂದ ಇಬ್ಬರು ಡಿಕ್ಕಿ ಮಾಡಿದರು. ಇದರಿಂದ ನಾವಿಬ್ಬರೂ ಬಿದ್ದೆವು. ಪತಿಯ ಎಡಗಾಲು ಮತ್ತಿತರ ಕಡೆಗಳಲ್ಲಿ ಗಾಯವಾಗಿದೆ. ನನಗೆ ಸಣ್ಣಪುಟ್ಟ ಗಾಯವಾಗಿದೆ. ಡಿಕ್ಕಿ ಮಾಡಿದವರು ನಮ್ಮ ಕಡೆಗೆ ತಿರುಗಿಯೂ ನೋಡದೆ, ಸಹಾಯಕ್ಕೂ ಬಾರದೆ (ಹಿಟ್ ಅಂಡ್ ರನ್) ಹೋದರು. ಇದೊಂದು ಪೂರ್ವಯೋಜಿತ ಕೃತ್ಯದಂತೆ ಎನಿಸುತ್ತಿದೆ’ ಎಂದು ಹಸನ್ ಪತ್ನಿ ಅಫ್ಸಾನಾ ಆರೋಪಿಸಿದ್ದಾರೆ.

‘ಸ್ಥಳದಲ್ಲಿದ್ದ ಕೆಲವರ ಸಹಾಯದಿಂದ ನಾವು ಆಸ್ಪತ್ರೆಗೆ ಹೋದೆವು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.