
ಬಾನು ಮೀರಾಸಾಬ ನದಾಫ, ಅನಿತಾ
ಬೆಳಗಾವಿ: ಜಿಲ್ಲೆಯ ಘಟಪ್ರಭಾ ಹಾಗೂ ಹಾರೂಗೇರಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಕಬ್ಬು ತುಂಬಿದ ಟ್ರ್ಯಾಕ್ಟರ್ ಹರಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲೋಳಸೂರು ಬಸ್ ನಿಲ್ದಾಣದ ಹತ್ತಿರ ಹೊರಟಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್ ಹರಿದು, ಬೈಕ್ ಮೇಲೆ ಹೊರಟಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಡ್ಡೇರಹಟ್ಟಿಯ ಅನಿತಾ ಡೂಗನವರ (26) ಮೃತಪಟ್ಟವರು. ಇವರ ಪತಿ ಗಣೇಶ ಭೀಮಪ್ಪ ಬೀರನಗಡ್ಡಿ ಅವರ ಎಲೆಕ್ಟ್ರಿಕ್ ಬೈಕ್ ಓಡಿಸುವಾಗ ಅನಿತಾ ಅವರು ಹಿಂಬದಿಯಲ್ಲಿ ಕುಳಿತಿದ್ದರು. ಹಿಂದಿನಿಂದ ಓವರ್ಟೇಕ್ ಮಾಡಿದ ಟ್ರ್ಯಾಕ್ಟರ್ ಅವರ ಮೇಲೆ ಹರಿದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
*
ಇನ್ನೊಂದೆಡೆ, ರಾಯಬಾಗ ತಾಲ್ಲೂಕಿನ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ತವಾಡ ಗ್ರಾಮದ ಬಳಿ ಶುಕ್ರವಾರ ರಾತ್ರಿ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಯುವಕರು ಗಾಯಗೊಂಡಿದ್ದಾರೆ.
ಬಾನು ಮೀರಾಸಾಬ ನದಾಫ ಅವರ ತಲೆಯ ಮೇಲೆ ಟ್ರ್ಯಾಕ್ಟರಿನ ಹಿಂಬದಿಯ ಗಾಲಿಯ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದರು. ಬೈಕ್ ಸವಾರ ಅಲ್ಲಾವುದ್ದೀನ್ ಹಾಗೂ ಮಧ್ಯದಲ್ಲಿ ಕುಳಿತಿದ್ದ ಶೋಯಬ್ ಗಾಯಗೊಂಡಿದ್ದಾರೆ. ಬಾನು ಅವರ ಪತಿ ಐನಾಪುರದ ಸಮೀರ ಮೀರಾಸಾಬ ನದಾಫ ದೂರು ನೀಡಿದ್ದಾರೆ. ಸವಸುದ್ದಿ ಗ್ರಾಮದ ಸಿದ್ದಪ್ಪ ಸತ್ಯಪ್ಪ ಲೋಕೂರ ಟ್ರ್ಯಾಕ್ಟರ್ ಚಾಲಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.