ADVERTISEMENT

ಬಾಲಕಿ ಸಾವು: ವಾಮಾಚಾರದ ಶಂಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 19:22 IST
Last Updated 1 ಅಕ್ಟೋಬರ್ 2021, 19:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಹಲ್ಯಾಳ ಗ್ರಾಮದ ಸಮೀಪ ರಸ್ತೆ ಪಕ್ಕದ ಕಬ್ಬಿನ ಗದ್ದೆಯಲ್ಲಿ ಅರೆಪ್ರಜ್ಞಾವಸ್ಥೆ ಮತ್ತು ಬೆತ್ತಲೆ ಸ್ಥಿತಿಯಲ್ಲಿ ಸೆ.23ರಂದು ಪತ್ತೆಯಾಗಿದ್ದ 2 ವರ್ಷದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ತಡರಾತ್ರಿ ಅಸುನೀಗಿದ್ದಾಳೆ.

ಎ‌ಸ್ಪಿ ಲಕ್ಷ್ಮಣ ನಿಂಬರಗಿ ಈ ವಿಷಯವನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಬಾಲಕಿಯ ಗುಪ್ತಾಂಗವೂ ಸೇರಿ ಮೈಮೇಲೆ ಅಲ್ಲಲ್ಲಿ ಸುಟ್ಟ ಗಾಯಗಳು ಕಂಡುಬಂದಿದ್ದವು. ಸ್ಥಳೀಯರು ನೀಡಿದ್ದ ಮಾಹಿತಿ ಆಧರಿಸಿ ಪೊಲೀಸರು ಆಕೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪೋಷಕರ ಪತ್ತೆಗೆ ಪೊಲೀಸರು ಹಲವು ರೀತಿಯಲ್ಲಿ ಪ್ರಯತ್ನಪಟ್ಟಿದ್ದರು. ನೆರೆಯ ಮಹಾರಾಷ್ಟ್ರದ ಪೊಲೀಸ್ ಠಾಣೆಗಳಿಗೂ ಫೋಟೊ ಮತ್ತು ವಿಡಿಯೊಗಳನ್ನು ಕಳುಹಿಸಿ, ಗುರುತು ಪತ್ತೆಗೆ ಸಹಕರಿಸುವಂತೆ ಕೋರಿದ್ದರು. ಆದರೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ADVERTISEMENT

ದುಷ್ಕರ್ಮಿಗಳು ಬಾಲಕಿಯನ್ನು ಕ್ಯಾರೆ ಬೀಜದಿಂದ ಸುಟ್ಟು, ವಾಮಾಚಾರಕ್ಕೆ ಬಳಸಿರುವ ಶಂಕೆ ವ್ಯಕ್ತವಾಗಿದೆ. ಮಗು ಪತ್ತೆಯಾಗಿ ಹಲವು ದಿನಗಳು ಕಳೆದಿದ್ದರೂ ಪೋಷಕರು ಪೊಲೀಸರ ಬಳಿಗೆ ಬಂದಿಲ್ಲ.
ಅಪಹರಣ ಪ್ರಕರಣವನ್ನಾಗಲಿ ಅಥವಾ ನಾಪತ್ತೆ ಪ್ರಕರಣವನ್ನಾಗಲಿ ದಾಖಲಿಸಿಲ್ಲ. ಹೀಗಾಗಿ, ಪೋಷಕರೇ ಮಗುವನ್ನು ವಾಮಾಚಾರಕ್ಕೆ ಬಳಸಿರಬಹುದು ಎಂದೂ ‍ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.