ADVERTISEMENT

ಉತ್ತರ ಕರ್ನಾಟಕ ರಂಗ ಕಲಾವಿದರ ತವರು: ನಟಿ ರೇಖಾ ದಾಸ್

ರಂಗಸ್ಮರಣೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 16:00 IST
Last Updated 7 ಮಾರ್ಚ್ 2022, 16:00 IST
ಗೋಕಾಕ ಜ್ಞಾನಮಂದಿರದಲ್ಲಿ ಸೋಮವಾರ ಆಶಾಕಿರಣ ಕಲಾ ಟ್ರಸ್ಟ್ ವತಿಯಿಂದ ವೃತ್ತಿ ರಂಗಭೂಮಿ ಕಲಾವಿದ ದಿ.ಬಿ.ಆರ್. ಅರಿಷಿಣಗೋಡಿ ಮತ್ತು ದಿ.ಬಸವಣ್ಣೆಪ್ಪ ಹೊಸಮನಿ ರಂಗ ಸ್ಮರಣೋತ್ಸವ ಸಮಾರಂಭದಲ್ಲಿ ನಾಟಕಕಾರ ಸಂಗಮೇಶ ಗುರವ ಮತ್ತು ಬಸವಣೆಪ್ಪ ಕಬಾಡಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ಗೋಕಾಕ ಜ್ಞಾನಮಂದಿರದಲ್ಲಿ ಸೋಮವಾರ ಆಶಾಕಿರಣ ಕಲಾ ಟ್ರಸ್ಟ್ ವತಿಯಿಂದ ವೃತ್ತಿ ರಂಗಭೂಮಿ ಕಲಾವಿದ ದಿ.ಬಿ.ಆರ್. ಅರಿಷಿಣಗೋಡಿ ಮತ್ತು ದಿ.ಬಸವಣ್ಣೆಪ್ಪ ಹೊಸಮನಿ ರಂಗ ಸ್ಮರಣೋತ್ಸವ ಸಮಾರಂಭದಲ್ಲಿ ನಾಟಕಕಾರ ಸಂಗಮೇಶ ಗುರವ ಮತ್ತು ಬಸವಣೆಪ್ಪ ಕಬಾಡಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಗೋಕಾಕ: ‘ಉತ್ತರ ಕರ್ನಾಟಕವು ರಂಗಭೂಮಿ ಕಲಾವಿದರ ತವರೂರಾಗಿದೆ’ ಎಂದು ಚಲನಚಿತ್ರ ನಟಿ ರೇಖಾ ದಾಸ್ ಹೇಳಿದರು.

ನಗರದ ಜ್ಞಾನಮಂದಿರ ಸಭಾಭವನದಲ್ಲಿ ಆಶಾಕಿರಣ ಕಲಾ ಟ್ರಸ್ಟ್ ವತಿಯಿಂದ ಸೋಮವಾರ ನಡೆದ ಗೋಕಾವಿ ನಾಡಿನ ವೃತ್ತಿ ರಂಗಭೂಮಿ ಕಲಾವಿದರಾದ ದಿ.ಬಿ.ಆರ್. ಅರಿಷಿಣಗೋಡಿ ಹಾಗೂ ದಿ.ಬಸವಣ್ಣೆಪ್ಪ ಹೊಸಮನಿ ರಂಗಸ್ಮರಣೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಂಗ ಕಲಾವಿದರು ನಾಟಕಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿದ್ದರು. ಅಂದಿನ ಕಲೆ ಹಾಗೂ ಸಂಸ್ಕೃತಿಯ ಪರಂಪರೆ ಉಳಿಸಬೇಕಾಗಿದೆ. ಇಂದಿನ ಯುವ ಪೀಳಿಗೆಗೆ ಅವುಗಳನ್ನು ಪರಿಚಯಿಸುವ ಮೂಲಕ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ADVERTISEMENT

ಜ್ಞಾನಮಂದಿರದ ಧರ್ಮದರ್ಶಿ ಸುವರ್ಣಾ ಹೊಸಮಠ ಉದ್ಘಾಟಿಸಿದರು.

ರಂಗಭೂಮಿ ದ್ರೋಣ ದಿ.ಬಿ.ಆರ್.ಅರಿಷಣಗೋಡಿ ರಂಗ ಪ್ರಶಸ್ತಿಯನ್ನು ಜಮಖಂಡಿಯ ನಾಟಕಕಾರ ಸಂಗಮೇಶ ಗುರವ ಹಾಗೂ ರಂಗಭೂಮಿ ಭೀಷ್ಮ ದಿ.ಬಸವಣೆಪ್ಪ ಹೊಸಮನಿ ರಂಗ ಪ್ರಶಸ್ತಿಯನ್ನು ಕೊಣ್ಣೂರ-ಶಿವಾಪೂರದ ಜಾನಪದ ಕಲಾವಿದ ಬಸವಣೆಪ್ಪ ಕಬಾಡಗಿ ಅವರಿಗೆ ಪ್ರದಾನ ಮಾಡಲಾಯಿತು.

ಸಾಹಿತಿ ದಿ.ಗವೀಶ ಹಿರೇಮಠ ಅವರ ಸ್ಮರಣಾರ್ಥ ಸಾಹಿತಿ ಸುಗಂಧಾ ಡಂಬಳ ಹಾಗೂ ಸಾಹಿತಿ ಗುಡ್ಡಿಹಳ್ಳಿ ನಾಗರಾಜ ಅವರ ಸ್ಮರಣಾರ್ಥ ಹಗಲುವೇಷ ಕಲಾವಿದ ಶಿವಣ್ಣ ಭಾರತಗಿ, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷೆ ಭಾರತಿ ಮದಭಾವಿ, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಆಯೋಗದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವೈಶಾಲಿ ಭರಭರಿ, ಸಾಹಿತಿ ಡಾ.ಲಕ್ಷ್ಮಣ ಚೌರಿ, ಡಾ.ಅಶೋಕ ಜಿರಗ್ಯಾಳ ಅವರನ್ನು ಗೌರವಿಸಲಾಯಿತು.

ಜೈರಾಜ ಹೊಸಮನಿ ಮತ್ತು ಪ್ರಾಚಾರ್ಯ ಜಯಾನಂದ ಮಾದರ ಉಪನ್ಯಾಸ ನೀಡಿದರು. ಸಾನ್ನಿಧ್ಯ ವಹಿಸಿದ್ದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಬಟಕುರ್ಕಿ ಚೌಕಿಮಠದ ಬಸವಪ್ರಭು ಸ್ವಾಮೀಜಿ, ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ತಾಂವಶಿ, ರಜನಿ ಜಿರಗ್ಯಾಳ, ಸಾಹಿತಿ ಚಂದ್ರಶೇಖರ್ ಅಕ್ಕಿ, ರಂಗ ಕಲಾವಿದೆ ಮಾಲತಿಶ್ರೀ ಮೈಸೂರು ಇದ್ದರು.

ಶ್ಯಲಾ ಕೊಕ್ಕರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.