ಅರ್ಥರೇಖೆಯಿದ್ದಲ್ಲಿ ಫಲವೇನು;
ಆಯುಷ್ಯರೇಖೆ ಇಲ್ಲದನ್ನಕ್ಕ?
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು?
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು?
ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?
ನಮ್ಮ ಕೂಡಲ ಸಂಗನ ಶರಣರನರಿಯದವರ ಕೈಯಲ್ಲಿ ಲಿಂಗವಿದ್ದು ಫಲವೇನು?
ಶಿವಪಥವನರಿಯದನ್ನಕ್ಕ!
ನಮ್ಮ ಆಚರಣೆಗಳು ಶ್ರದ್ಧೆ ಮತ್ತು ನಿಷ್ಠೆಯಿಂದ ಕೂಡಿರದಿದ್ದರೆ, ಎಲ್ಲವೂ ವ್ಯರ್ಥವಾಗುತ್ತವೆ. ಅದಕ್ಕೆ ಬಸವಣ್ಣನವರು ಉದಾಹರಣೆ ಸಹಿತವಾಗಿ ವಿವರಿಸಿದ್ದಾರೆ. ನಮ್ಮ ಕೈಯಲ್ಲಿ ಧನರೇಖೆ ಇದ್ದು, ಆಯುಷ್ಯವೇ ಇರದಿದ್ದರೆ ಏನೇನೂ ಪ್ರಯೋಜನವಿಲ್ಲ. ಹೇಡಿಯ ಕೈಯಲ್ಲಿ ಎಂತಹ ಆಯುಧವನ್ನು ಕೊಟ್ಟರೂ ಅವನಿಂದ ಯಾವುದೇ ಪರಾಕ್ರಮ ಸಾಧ್ಯವಿಲ್ಲ. ಕನ್ನಡಿಯಿಂದ ಕುರುಡನಿಗೆ ಯಾವುದೇ ಪ್ರಯೋಜನವಿಲ್ಲ. ಮಾಣಿಕ್ಯದ ಮಹತ್ವವು ಮಂಗನಿಗೆ ತಿಳಿಯುವುದಿಲ್ಲ. ಅದರಂತೆ ಮಹಾತ್ಮರ, ಶಿವಶರಣರ, ಅನುಭಾವಿಗಳ ಮಹತ್ವವನ್ನು ತಿಳಿಯದೆ ಲಿಂಗವ ಪೂಜಿಸಿದರೆ ಯಾವುದೇ ಪ್ರಯೋಜನವಿಲ್ಲ. ಮುಕ್ತಿ ದೊರೆಯಬೇಕಾದರೆ, ಸಜ್ಜನರ ಶಿವಾನುಭವಿಗಳ ಸಂಗ ಮಾಡಬೇಕು ಎನ್ನುವುದು ಈ ವಚನದ ಸಾರವಾಗಿದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾತ್ಮರು ಮತ್ತು ಶಿವಶರಣರು ನೀಡಿದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಳ್ಳೆಯ ದಾರಿಯಲ್ಲಿ ನಡೆಯಬೇಕು.
ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.