ADVERTISEMENT

ಬಾಲಿವುಡ್ ಛಾಯಾಗ್ರಾಹಕ ಈಶ್ವರ ಬಿದರಿ ನಿಧನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 16:48 IST
Last Updated 27 ಡಿಸೆಂಬರ್ 2020, 16:48 IST

ಬೆಳಗಾವಿ: ಬಾಲಿವುಡ್‌ ಛಾಯಾಗ್ರಾಹಕರಾಗಿ 1990ರ ದಶಕದಲ್ಲಿ ದೊಡ್ಡ ಹೆಸರು ಮಾಡಿದ್ದ ಕನ್ನಡಿಗ ಈಶ್ವರ ಬಿದರಿ (87) ಅನಾರೋಗ್ಯದಿಂದ ಭಾನುವಾರ ಇಲ್ಲಿ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಇದ್ದಾರೆ. ಮೃತರು, ನಿವೃತ್ತ ಡಿಜಿಪಿ ಶಂಕರ ಬಿದರಿ ಅವರ ಚಿಕ್ಕಪ್ಪ.

ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಅವರಿಗೆ ಡಿ.20ರಂದು ಹೃದಯಾಘಾತವಾಗಿತ್ತು. ಕುಟುಂಬದವರು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರಿದಿತ್ತು. ಭಾನುವಾರ ಬೆಳಿಗ್ಗೆ ಮತ್ತೆ ಹೃದಯಾಘಾತವಾಗಿ ಕೊನೆಯುಸಿರೆಳೆದರು. ವಯೋಸಹಜ ಕಾರಣಕ್ಕೆ ಹಲವು ಆರೋಗ್ಯದ ಸಮಸ್ಯೆಗಳು ಅವರಿಗೆ ಇದ್ದವು. ವಿಜಯಪುರದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಹಿಂದಿಯ ಪ್ರಸಿದ್ಧ ‘ಶೋಲೆ’ ಚಲನಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು.

ಬೆಂಗಳೂರಿನ ಎಸ್‌.ಜೆ. ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೊಗ್ರಫಿ ಕಲಿತ ಅವರು, ಮುಂಬೈನಲ್ಲಿ ಕನ್ನಡಿಗರೇ ಆದ ವಿ.ಕೆ. ಮೂರ್ತಿ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು. ವಿ.ಕೆ. ಮೂರ್ತಿ ಛಾಯಾಗ್ರಹಣ ಮಾಡಿರುವ ‘ಪ್ಯಾಸಾ’, ‘ಕಾಗಝ್‌ ಕೆ ಫೂಲ್‌’ ಸೇರಿದಂತೆ ಹಲವು ಹಿಂದಿ ಚಿತ್ರಗಳಿಗೆ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಸ್ವತಂತ್ರ್ಯ ಛಾಯಾಗ್ರಾಹಕರಾಗಿ ‘ಬಾರ್ಡರ್‌’, ‘ಘಾತಕ್‌’, ‘ಅಂದಾಜ್‌’, ‘ಢಾಯಿ ಅಕ್ಷರ್ ಪ್ರೇಮ್‌ ಕೆ’, ‘ಅಂದಾಜ್‌ ಅಪ್ನಾ ಅಪ್ನಾ’, ‘ದಾಮಿನಿ’, ‘ಬಟ್ವಾರಾ’, ‘ಘುಲಾಮಿ’, ‘ಹತ್ಯಾರ್‌’, ‘ಯತೀಮ್‌’ ಸೇರಿದಂತೆ ಹಲವು ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.