ADVERTISEMENT

₹60 ಕೋಟಿ ವೆಚ್ಚದಲ್ಲಿ ಸೌರ ಪಾರ್ಕ್: ಪೃಥ್ವಿ ಕತ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 10:41 IST
Last Updated 30 ಅಕ್ಟೋಬರ್ 2020, 10:41 IST
ರಮೇಶ್ ಕತ್ತಿ
ರಮೇಶ್ ಕತ್ತಿ   

ಹುಕ್ಕೇರಿ: ದಿ.ಅಪ್ಪಣಗೌಡರು ಪ್ರಾಯೋಗಿಕವಾಗಿ 1969ರಲ್ಲಿ ಸ್ಥಾಪಿಸಿದ ದೇಶದ ಐದು ಸಂಘಗಳ ಪೈಕಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವೊಂದೇ ಉಳಿದು, ಬೆಳೆದು ಜನರಿಗೆ– ರೈತರಿಗೆ ಸೇವೆ ಸಲ್ಲಿಸುತ್ತಿದೆ. ಈ ಭಾಗದ ಜನರ ಸಹಕಾರಿ ಮನೋಭಾವವನ್ನು ಇದು ಎತ್ತಿ ತೋರಿಸುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹೇಳಿದರು. ಗುರುವಾರ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಜರುಗಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 50 ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯ ಸಂಘಕ್ಕೆ ಸಿಕ್ಕಿದೆ ಎಂದರು.

ಹಸಿರು ಇಂಧನ: ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿರುವ ವಿಶ್ವರಾಜ್ ಶುಗರ್ಸ್ ವತಿಯಿಂದ ಅಂದಾಜು ₹ 60 ಕೋಟಿ ವೆಚ್ಚದಲ್ಲಿ ’ಸೋಲಾರ್ ಪಾರ್ಕ್’ ಸ್ಥಾಪಿಸುವ ಇರಾದೆ ಇದ್ದು, ತನ್ಮೂಲಕ ತಾಲ್ಲೂಕಿನ ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಜರುಗಿಸುವ ಯೋಜನೆ ಇದಾಗಿದೆ ಎಂದು ಸಂಘದ ನಿರ್ದೇಶಕರೂ ಆದ ವಿಶ್ವರಾಜ ಶುಗರ್ಸ್ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಶಾಸಕ ಉಮೇಶ್ ಕತ್ತಿ ಅವರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ ಎಂದರು.

ನಿರಂತರ ಜ್ಯೋತಿ: ತೋಟಪಟ್ಟಿಯ ’ಗುಂಪು ಮನೆ’ ಹೊಂದಿದ ಜನರಿಗೆ ಬರುವ ಮಾರ್ಚ್ ಒಳಗೆ ನಿರಂತರ ಜ್ಯೋತಿ ಕಲ್ಪಿಸುವ ಯೋಜನೆಯನ್ನು ಆಡಳಿತ ಮಂಡಳಿ ಹೊಂದಿದೆ ಎಂದರು.

ADVERTISEMENT

ವಂಕಿ ಬೇಡ: ಎಲ್ಲೆಲ್ಲಿ ಲೈನ್ ಹಾದಿದೆಯೊ ಅದರ ಮೇಲೆ ವಂಕಿ (ಜಂಪ್) ಹಾಕುವ ಮಾಹಿತಿ ತಮಗೆ ಬಂದಿದ್ದು, ರೈತರು ಹಾಗೆ ಮಾಡುವುದರಿಂದ ಟಿಸಿ ಸುಟ್ಟು ಹೋಗಿ ತೊಂದರೆಯಾಗುವುದು. ಅನಧಿಕೃತ ಸಂಪರ್ಕ ಅಧಿಕೃತ ಮಾಡಿಕೊಳ್ಳಿ ಎಂದರು. ಸಂಘದ ನಿರ್ದೇಶಕರು, ರೆಸಿಡೆಂಟ್ ಎಂಜಿನಿಯರ್ ನೇಮಿನಾಥ ಖೆಮಲಾಪುರೆ, ಮ್ಯಾನೇಜರ್ ದುರದುಂಡಿ ನಾಯಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.