ADVERTISEMENT

ರೈಲ್ವೆ ಯೋಜನೆ ಅಡ್ಡಿಪಡಿಸಬೇಡಿ: ಬೆಳಗಾವಿಗರಲ್ಲಿ ಸಚಿವ ವಿ.ಸೋಮಣ್ಣ ಮನವಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 15:40 IST
Last Updated 7 ಫೆಬ್ರುವರಿ 2026, 15:40 IST
ವಿ.ಸೋಮಣ್ಣ
ವಿ.ಸೋಮಣ್ಣ   

ಬೆಳಗಾವಿ: ‘ಬೆಳಗಾವಿಯಲ್ಲಿ ಕೈಗೆತ್ತಿಕೊಂಡ ಏಳು ರೈಲ್ವೆ ಮೇಲ್ಸೇತುವೆಗಳ ಪೈಕಿ ಎರಡು ಮಾತ್ರ ನಿರ್ಮಾಣವಾಗಿವೆ. ಇನ್ನೂ ಐದು ಬಾಕಿ ಇವೆ. ಜನ ಸಹಕಾರ ನೀಡಿದರೆ ಬೇಗ ಕೆಲಸಗಳು ಆಗುತ್ತವೆ’ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.

‘ದೇಸೂರು– ಬೆಳಗಾವಿ ಮಾರ್ಗದಲ್ಲಿ ₹55 ಕೋಟಿ ಹಾಗೂ ₹63 ಕೋಟಿ ವೆಚ್ಚದ ಎರಡು ಮೇಲ್ಸೇತುವೆ, ಉದ್ಯಮಬಾಗ, ಬೆಳಗಾವಿ– ಸಾಂಬ್ರೆ ಮಾರ್ಗದ ₹43 ಕೋಟಿ ವೆಚ್ಚದ ಸೇತುವೆ, ಖಾನಾಪುರ– ದೇಸೂರು ಮಾರ್ಗದ ₹17 ಕೋಟಿ ವೆಚ್ಚದ ಸೇತುವೆ ಮುಂತಾದ ಕೆಲಸಗಳು ಆಗಬೇಕಿದೆ. ಆದರೆ, ಜನ ಮಹತ್ವದ ಯೋಜನೆಗಳಿಗೆ ಅಡ್ಡಗಾಲು ಹಾಕಬಾರದು’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

‘ಈಗಾಗಲೇ ಅಳ್ನಾವರ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಘಟಪ್ರಭಾ ರೈಲು ನಿಲ್ದಾಣ, ಬೆಳಗಾವಿ– ಚಿಕ್ಕೋಡು ಮಾರ್ಗ, ರಾಜಿಗುಡ್ಡ– ಲೋಕಾಪುರ ಮಾರ್ಗ, ಲೋಕಾಪುರ– ಯಾದವಾಡ ಮಾರ್ಗ, ಯಾದವಾಡ ಜಮಖಂಡಿ ಮಾರ್ಗಗಳು ಪ್ರಗತಿಯಲ್ಲಿವೆ. ಗೋಕಾಕ ರೈಲ್ವೆ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗಿದೆ. 2027ರ ಹೊತ್ತಿಗೆ ಈ ಎಲ್ಲ ಕಾಮಗಾರಿಗಳನ್ನೂ ಮುಗಿಸುವ ಉದ್ದೇಶಕ್ಕೆ ಜನ ಸಹಕಾರ ನೀಡಬೇಕು’ ಎಂದರು.

ADVERTISEMENT

ಕೇಂದ್ರ ಬಜೆಟ್‌ ಪ್ರಶಂಸೆ: ‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಬಾರಿಯ ಕೇಂದ್ರದ ಬಜೆಟ್‌ ದೂರದೃಷ್ಟಿಯಿಂದ ಕೂಡಿದೆ. 2047ಕ್ಕೆ ಭಾರತ ಬಲಿಷ್ಠಗೊಳ್ಳಲು ಏನು ಬೇಕೋ ಅದನ್ನು ಮಾಡಿದ್ದೇವೆ. ದೆಹಲಿಯಲ್ಲಿ ನಿರ್ಮಿಸಿದ ಕರ್ತವ್ಯ ಭವನದಲ್ಲಿ ಮಂಡಿಸಿದ ಮೊದಲ ಬಜೆಟ್‌ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ’ ಎಂದು ಸೋಮಣ್ಣ ‍ಪ್ರಶಂಸಿಸಿದರು.

‘ರಾಜ್ಯಗಳ ಪಾಲುದಾರಿಕೆ ವೃದ್ಧಿ, ಗುಣಮಟ್ಟದ ಶಿಕ್ಷಣ, ಆರೋಗ್ಯ, ಕೌಶಲ ವೃದ್ಧಿ, ಕಿರು ಉದ್ಯಮಗಳ ಅಭಿವೃದ್ಧಿ ಮುಂತಾದ ಯೋಜನೆಗಳಿಗೆ ಕನಿಷ್ಠ 10 ಸಾವಿರ ಕೋಟಿಯಿಂದ ₹50 ಸಾವಿರ ಕೋಟಿಯವರೆಗೆ ಅನುದಾನ ನೀಡಲಾಗಿದೆ. ದೇಶದ 14 ಪ್ರಮುಖ ನಗರಗಳನ್ನು ಸಂಪರ್ಕಿಸಲು ಹೈ ಸ್ಪೀಡ್‌ ರೈಲುಗಳನ್ನು ಘೋಷಿಸಲಾಗಿದೆ. ತೆಂಗು, ಗೋಡಂಬಿಯೂ ಸೇರದಂತೆ ಅನ್ನದಾತರ ಕಲ್ಯಾಣಕ್ಕೆ ₹1.63 ಲಕ್ಷ ಕೋಟಿ, ಶಿಕ್ಷಣಕ್ಕೆ ₹1.63 ಲಕ್ಷ ಕೋಟಿ ಅನುದಾನ ನೀಡಲಾಗಿದೆ’ ಎಂದು ವಿಶ್ಲೇಷಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ‍ಪಾಟೀಲ, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡ್ಡಗೌಡರ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ ಕತ್ತಿ, ನಗರ ಸೇವಕ ಹಣಮಂತ ಕೊಂಗಾಲಿ, ಅಶ್ವತ್ಥ ನಾರಾಯಣ, ಎಂ.ಬಿ.ಝಿರಲಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.