ADVERTISEMENT

‘ಗಂಗಾಂಬಿಕೆ ಬದುಕಿನ ಮೌಲ್ಯಗಳು ದಾರಿದೀಪ’-ಡಾ.ನಾಗೇಂದ್ರ ಚಲವಾದಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 6:18 IST
Last Updated 14 ಏಪ್ರಿಲ್ 2021, 6:18 IST
ಬೆಳಗಾವಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಸಾಹಿತಿ ಡಾ.ನಾಗೇಂದ್ರ ಚಲವಾದಿ ಅವರನ್ನು ಸಂಘಟಕರು ಸತ್ಕರಿಸಿದರು
ಬೆಳಗಾವಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಸಾಹಿತಿ ಡಾ.ನಾಗೇಂದ್ರ ಚಲವಾದಿ ಅವರನ್ನು ಸಂಘಟಕರು ಸತ್ಕರಿಸಿದರು   

ಬೆಳಗಾವಿ: ‘ಬಸವಣ್ಣನ ಪತ್ನಿ ಗಂಗಾಂಬಿಕೆ ತಮ್ಮ ವಚನಗಳಲ್ಲಿ ಪತಿಯ ವ್ಯಕ್ತಿತ್ವದ ವರ್ಣನೆಯೊಂದಿಗೆ, ಬಾಲ್ಯದಲ್ಲಿ ಮರಣಿಸಿದ ಮಗನ ಕುರಿತಂತೆ ದುಃಖದ ಅಭಿವ್ಯಕ್ತಿ ಇದೆ’ ಎಂದು ಸಾಹಿತಿ ಡಾ.ನಾಗೇಂದ್ರ ಚಲವಾದಿ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಗಂಗಾಬಿಕೆಯವರು ಕಲ್ಯಾಣ ಪಟ್ಟಣದ ಮಹಾಮನೆಯಲ್ಲಿ ಪ್ರತಿ ನಿತ್ಯ ಜರುಗುತ್ತಿದ್ದ ಪೂಜೆ, ಪ್ರಸಾದ ವ್ಯವಸ್ಥೆಯ ಸಮಸ್ತ ಉಸ್ತುವಾರಿಯನ್ನು ಹೊತ್ತು ಬಸವಾದಿ ಪ್ರಮಥರು ನಿರ್ವಹಿಸಿದ್ದ ಕಾಯಕವನ್ನು ನಿಷ್ಠೆಯಿಂದ ಪೂರೈಸುತ್ತಿದ್ದರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಿಜ್ಜಳನ ಸೈನ್ಯವು ಶರಣರನ್ನು ಬೆನ್ನಟ್ಟಿತ್ತು. ಶರಣರು ಗುಂಪು ಗುಂಪುಗಳಾಗಿ ಉಳವಿ, ಶ್ರೀಶೈಲ, ಕೂಡಲಸಂಗಮದ ಕಡೆಗೆ ನಡೆದವು. ಗುಂಪೊಂದು ಕಾದರವಳ್ಳಿಯ ಸಮೀಪದಲ್ಲಿ ಬಿಜ್ಜಳನ ಸೈನ್ಯದೊಂದಿಗೆ ಹೋರಾಡಿತು. ಗಂಗಾಂಬಿಕೆ ಒಂದು ಕೈಯಲ್ಲಿ ವಚನದ ಕಟ್ಟು, ಇನ್ನೊಂದು ಕೈಯ್ಯಲ್ಲಿ ಖಡ್ಗ ಹಿಡಿದು ವೈರಿಗಳೊಡನೆ ಸೆಣಸಿ ಗಣಾಚಾರ ತತ್ವ ಪಾಲಿಸಿದರು. ಆ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡು ಲಿಂಗೈಕ್ಯರಾದರು. ಮಲೆಪ್ರಭಾ ದಂಡೆಯಲ್ಲಿ ಅವರನ್ನು ಸಮಾಧಿ ಮಾಡಿ ಗುಡಿ ಕಟ್ಟುತ್ತಾರೆ. ಅಲ್ಲಿ ಇಂದು ಗಂಗಾಂಬಿಕೆಯ ಐಕ್ಯ ಮಂಟಪ ನಿರ್ಮಿಸಲಾಗಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ‘ಲೌಕಿಕ ಮತ್ತು ಪಾರಮಾರ್ಥಿಕ ಜೀವನ ಸಾರ್ಥಕಪಡಿಸಿಕೊಂಡ ಗಂಗಾಂಬಿಕೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಬದುಕಿದ ಮೌಲ್ಯಗಳು ದಾರಿದೀಪ’ ಎಂದು ತಿಳಿಸಿದರು.

ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಧು ವರ ಅನ್ವೇಷಣೆ ಕೇಂದ್ರದ ಅಧ್ಯಕ್ಷ ಡಾ.ಎಫ್.ವಿ. ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಬದಾಮಿ ಇದ್ದರು.

ಅನಿತಾ ಮಾಲಗತ್ತಿ ವಚನ ಪ್ರಾರ್ಥನೆ ಮಾಡಿದರು. ಆಶಾ ಯಮಕನಮರಡಿ ಪರಿಚಯಿಸಿದರು. ಶೈಲಾ ಸವಸುದ್ದಿ ವಚನ ವಿಶ್ಲೇಷಣೆ ಮಾಡಿದರು. ವಿದ್ಯಾ ಮತ್ತು ಶ್ವೇತಾ ಮುಂಗರವಾಡಿ ನಿರ್ವಹಿಸಿದರು. ಆಶಾ ಸವಸುದ್ದಿ, ಕೀರ್ತಿ ಮತ್ತು ಕವಿತಾ ಶಿವಪೂಜಿಮಠ, ರೇವತಿ ದೇಸಾಯಿ ಗಾಯನ ಪ್ರಸ್ತುತಪಡಿಸಿದರು. ವಕೀಲ ವಿ.ಕೆ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.