ADVERTISEMENT

ಯಮಕನಮರಡಿ: ಸಮಾಜ ಸೇವೆಗೆ ಜೀವನ ಮೀಸಲು -ರಾಹುಲ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 5:19 IST
Last Updated 4 ಅಕ್ಟೋಬರ್ 2021, 5:19 IST
ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಜಾರಕಿಹೊಳಿ ಮಾತನಾಡಿದರು
ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಜಾರಕಿಹೊಳಿ ಮಾತನಾಡಿದರು   

ಯಮಕನಮರಡಿ; ‘ನನ್ನ ಜೀವನ ಸಮಾಜ ಸೇವೆಗೆ ಮೀಸಲು’ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.

ಹುಕ್ಕೇರಿ ತಾಲ್ಲೂಕಿನ ಕರಗುಪ್ಪಿ ಗ್ರಾಮದಲ್ಲಿ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ತಮ್ಮ 22ನೇ ಜನ್ಮದಿನ ಸಂಭ್ರಮಾಚರಣೆ ಸಮಾರಂಭದಲ್ಲಿ ಮಾತನಾಡಿದರು. ‘ನಾನು ಇತ್ತೀಚೆಗೆ ಏರೊನಾಟಿಕಲ್ ಎಂಜಿನಿಯರಿಂಗ್ ಪದವಿ ಪೂರೈಸಿದ್ದೇನೆ. ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದೇನೆ’ ಎಂದು ಹೇಳಿದರು.

‘ತಂದೆ ಸತೀಶ ಜಾರಕಿಹೊಳಿ ಅವರೊಂದಿಗೆ ಚಿಕ್ಕಂದಿನಿಂದಲೂ ಸರಿಯಾಗಿ ಸಮಯ ಕಳೆಯಲು ಆಗಿಲ್ಲ. ಏಕೆಂದರೆ ಅವರು ತಮ್ಮ ಬಹುತೇಕ ಸಮಯವನ್ನು ಸಮಾಜ ಸೇವೆಯಲ್ಲಿಯೇ ಕಳೆಯುತ್ತಾರೆ. ಆದರೆ ಈ ಭಾಗದ ಜನ ಅವರನ್ನು ದೇವರಂತೆ ಕಾಣುವುದರಿಂದ ನಮಗೆ ನಮ್ಮ ತಂದೆಯವರ ಬಗ್ಗೆ ಹೆಮ್ಮೆಯಾಗುತ್ತದೆ. ಅವರಿಂದ ಪ್ರೇರಣೆಗೊಂಡು ನಾನು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ ಎಂದರು.

ADVERTISEMENT

‘ಅನೇಕರು ಅಭಿಮಾನದಿಂದ ಕೇಕ್‌ ತಂದಿದ್ದೀರ, ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದೀರಿ. ಇದರಿಂದ ನನಗೆ ಸಂತಸವಾಗಿದೆ. ಆದರೆ ಮುಂದಿನ ವರ್ಷದಿಂದ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವುದು ಬೇಡ‘ ಎಂದರು.

ರಾಹುಲ್ ಜನ್ಮದಿನದ ಅಂಗವಾಗಿ ಸತೀಶ್ ಶುಗರ್ಸ್‌ ಹಾಗೂ ಸತೀಶ್ ಫೌಂಡೇಷನ್ ವತಿಯಿಂದ ಪ್ರತಿವರ್ಷ ₹1 ಕೋಟಿ ರೂಪಾಯಿಯನ್ನು ಸಮಾಜಸೇವೆಗೆ ಮೀಸಲಿಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಘೋಷಿಸಿದರು. ಯಮಕನಮರಡಿಯ ಹುಣಸಿಕೊಳ್ಳಮಠದ ಶ್ರೀಗುರು ರಾಚೋಟಿ ಸ್ವಾಮೀಜಿ, ಹತ್ತರಗಿ ಕಾರೀಮಠದ ಗುರುಸಿದ್ಧ ಸ್ವಾಮೀಜಿ, ಉಳ್ಳಾಗಡ್ಡಿ ಖಾನಾಪುರ ಬೃಹನ್ಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಡೋಲಿ ದುರದುಂಡೇಶ್ವರ ಮಠದ ಗುರುಬಸವಲಿಂಗ ಸ್ವಾಮೀಜಿ, ಕುಂದರಗಿ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ, ಮುಕ್ತಿಮಠದ ಶಿವಸಿದ್ದ ಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮುಖಂಡರಾದ ಲಕ್ಷ್ಮಣರಾವ್ ಚಿಂಗಳೆ, ವಿನಯ ನಾವಲಗಟ್ಟಿ, ಪಾಂಡು ಮನ್ನಿಕೇರಿ, ಮಹೇಶ ಕಡಪಟ್ಟಿ, ಅರವಿಂದ ಕಾಕತಿ, ಮಾರುತಿ ಗುಟಗುದ್ದಿ, ವೀವೇಕ ಜತ್ತಿ, ಮಲ್ಲಗೌಡ ಪಾಟೀಲ, ಪ್ರದೀಪ ಎಂ.ಜೆ., ಕಿರಣ ರಜಪೂತ, ಪ್ರಕಾಶ ಬಸಾಪುರೆ, ರಾಜು ದರ್ಗಶೆಟ್ಟಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.