
ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದವರು ಪ್ರತಿಭಟನೆ ನಡೆಸಿದರು
ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನದ ಎಂಟನೇ ದಿನವಾದ ಬುಧವಾರವೂ ಸರಣಿ ಪ್ರತಿಭಟನೆಗಳಿಗೆ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆ ಸಾಕ್ಷಿಯಾಯಿತು. ವಿವಿಧ ಸಂಘಟನೆಯವರು ಧರಣಿ ಮಾಡಿ, ತಮ್ಮ ಹಕ್ಕೊತ್ತಾಯ ಮಂಡಿಸಿದರು.
ಒಪಿಎಸ್ ಜಾರಿಗೊಳಿಸಲು ಆಗ್ರಹ
ರಾಜ್ಯದಲ್ಲಿ 2006ರ ಏಪ್ರಿಲ್ 1ಕ್ಕಿಂತ ಮುನ್ನ, ನೇಮಕಗೊಂಡು ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೇ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದವರು ಪ್ರತಿಭಟನೆ ನಡೆಸಿದರು.
ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಾಲಾ, ಕಾಲೇಜುಗಳ ನೌಕರರಿಗೂ ವಿಸ್ತರಿಸಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಜಿ.ಹನುಮಂತಪ್ಪ, ರಾಮು ಗುಗವಾಡ, ಎನ್.ರಾಜಗೋಪಾಲ್, ಅಬ್ದುಲ್ಖಾದರ್ ಮೆಣಸಗಿ ನೇತೃತ್ವ ವಹಿಸಿದ್ದರು.
ಮಾನ್ಯತೆ ನೀಡಲು ಆಗ್ರಹ
‘ಆಂಧ್ರಪ್ರದೇಶ ಮಾದರಿಯಲ್ಲಿ ನಮಗೂ ತರಬೇತಿ ನೀಡಿ, ಸೇವೆ ಸಲ್ಲಿಸಲು ಮಾನ್ಯತೆ ಒದಗಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಥಮ ಚಿಕಿತ್ಸಾ ವೈದ್ಯರ ಸಂಘದವರು ಪ್ರತಿಭಟಿಸಿದರು.
‘ಮೂಲಸೌಕರ್ಯದಿಂದ ವಂಚಿತವಾಗಿರುವ ಗ್ರಾಮೀಣ ಭಾಗದಲ್ಲಿ ಸೇವೆ ಒದಗಿಸುತ್ತಿರುವ ನಮಗೆ ಮಾನ್ಯತೆ ಕೊಡಬೇಕು. ಸರ್ಕಾರಿ ವಲಯದಲ್ಲಿ ಪ್ರಥಮ ಚಿಕಿತ್ಸಕರನ್ನು ನೇಮಿಸಿಕೊಳ್ಳಬೇಕು. ಟಾಸ್ಕ್ಫೋರ್ಸ್ ಕಾರ್ಯಾಚರಣೆ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಜೆ.ಸಿದ್ದಾರೆಡ್ಡಿ, ಎಂ.ಎಸ್.ಕದ್ದಿಮನಿ, ಆರ್.ಆರ್.ಪಾಟೀಲ ನೇತೃತ್ವ ವಹಿಸಿದ್ದರು.
ವೇತನ ಪರಿಷ್ಕರಣೆಗೆ ಆಗ್ರಹ
‘ಏಳು ಮತ್ತು ಎಂಟನೇ ತ್ರಿಪಕ್ಷೀಯ ಸಕ್ಕರೆ ವೇತನ ಪರಿಷ್ಕರಣೆ ಒಪ್ಪಂದದಂತೆ, ನಮ್ಮ ವೇತನ ಪರಿಷ್ಕರಿಸಬೇಕು. ಸರ್ಕಾರಿ ಆದೇಶದ ವಿರುದ್ಧ ಕೆಲವು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ತಂದಿರುವ ತಡೆಯಾಜ್ಞೆ ತೆರವುಗೊಳಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ಷುಗರ್ ವರ್ಕರ್ಸ್ ಫೆಡರೇಷನ್ನವರು ಪ್ರತಿಭಟಿಸಿದರು. ಮುಖಂಡರಾದ ಮೋಹನ ಕೋಠಿವಾಲಾ, ಅಸ್ಲಂ ಪೆಂಡಾರಿ, ಬಿ.ನಾಗರಾಜ, ಎಸ್.ಬಿ.ಬಿರಾದಾರಪಾಟೀಲ, ಅನಿಲ ನಾಮಗೇರಿ ನೇತೃತ್ವ ವಹಿಸಿದ್ದರು.
‘ಸಿ’ ದರ್ಜೆ ನೌಕರರೆಂದು ಪರಿಗಣಿಸಿ’
ಸುವರ್ಣ ವಿಧಾನಸೌಧ ಬಳಿಯ ವೇದಿಕೆಯಲ್ಲಿ ಗ್ರಂಥಾಲಯಗಳ ಮೇಲ್ವಿಚಾರಕರು ಹೋರಾಟ ಮಾಡಿದರು
ಹೈಕೋರ್ಟ್ ಆದೇಶದಂತೆ, ನಮ್ಮನ್ನು ‘ಸಿ’ ದರ್ಜೆ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಪಟ್ಟಣ ಪಂಚಾಯಿತಿ/ ಪುರಸಭೆ/ ನಗರಸಭೆ/ ಬಿಬಿಎಂಪಿ ಗ್ರಂಥಾಲಯ ಮೇಲ್ವಿಚಾರಕರ ಸಂಘದವರು ಪ್ರತಿಭಟನೆ ನಡೆಸಿದರು.
ಮುಖಂಡರಾದ ಶಿವಶರಣಪ್ಪ ಹೊಸಮನಿ, ಕಲ್ಲಬಸವಯ್ಯ ಎ.ಪಿ., ಕೆಂಚಪ್ಪ ಹಾರೂಗೇರಿ ನೇತೃತ್ವ ವಹಿಸಿದ್ದರು.
‘ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಸೌಲಭ್ಯ ಕೊಡಿ’
‘ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಸೌಲಭ್ಯಗಳನ್ನು ನೀಡಿ, ಗುರುತಿನ ಚೀಟಿ ಹಂಚಿಕೆ ಮಾಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾಸಂಘದವರು ಪ್ರತಿಭಟಿಸಿದರು.
ನೇಕಾರರ ಸಂಪೂರ್ಣ ಸಾಲಮನ್ನಾ ಮಾಡಬೇಕು. ವಿವಿಧ ಯೋಜನೆಗಳ ಜಾರಿಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಗೆ ವಾರ್ಷಿಕ ₹1,500 ಕೋಟಿ ಅನುದಾನ ಮೀಸಲಿಡಬೇಕು. 55 ವರ್ಷ ಮೇಲ್ಪಟ್ಟ ನೇಕಾರರಿಗೆ ₹5 ಸಾವಿರ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶಿವಲಿಂಗ ಟಿರಕಿ, ರಾಜೇಂದ್ರ ಮಿರ್ಜಿ, ಎ.ಪಿ.ನಾಗರಾಜ, ಸಂಗಪ್ಪ ಉದಗಟ್ಟಿ ಇತರರಿದ್ದರು.
‘ಕನಿಷ್ಠ ವೇತನ ಕೊಡಿ’
ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗೃಹ ಕಾರ್ಮಿಕರ ಹಕ್ಕಿನ ಒಕ್ಕೂಟದವರು ಧರಣಿ ಮಾಡಿದರು.
ಗೃಹ ಕಾರ್ಮಿಕರ ಕಲ್ಯಾಣಕ್ಕಾಗಿ ರೂಪಿಸಿದ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆ ಇಂಗ್ಲಿಷ್ ಆವೃತ್ತಿಯಲ್ಲಿ ಮಾತ್ರವಿದೆ. ಅದರ ಕನ್ನಡ ಆವೃತ್ತಿಯನ್ನು ಪ್ರಕಟಿಸಬೇಕು. ಗೃಹ ಕಾರ್ಮಿಕರಿಗೆ ವಾರ್ಷಿಕ ಬೋನಸ್ ನೀಡಬೇಕು. ಸಾಮಾಜಿಕ ಭದ್ರತೆ ಒದಗಿಸಬೇಕು. ಜೀವ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಗೀತಾ ಮೆನನ್, ಶೋಭಾ ಕಿಣಗಿ, ವೈಶಾಲಿ ಕಮ್ಮಾರ ನೇತೃತ್ವ ವಹಿಸಿಕೊಂಡಿದ್ದರು.
‘ನಮಗೆ ಪ್ರತ್ಯೇಕವಾಗಿಯೇ ಶೇ 1ರಷ್ಟು ಮೀಸಲಾತಿ’
‘ಶಿಕ್ಷಣ ಮತ್ತು ಉದ್ಯೋಗದಲ್ಲಿ ನಮಗೆ ಪ್ರತ್ಯೇಕವಾಗಿಯೇ ಶೇ 1ರಷ್ಟು ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಪದಾಧಿಕಾರಿಗಳು ಪ್ರತಿಭಟಿಸಿದರು.
‘ನ್ಯಾ.ನಾಗಮೋಹನದಾಸ್ ಆಯೋಗದ ಶಿಫಾರಸಿನ ಪ್ರಕಾರ, ಈ ಹಿಂದೆ ನಮಗೆ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿ ಕೊಡಲಾಗಿತ್ತು. ಈಗ ಬಲಾಢ್ಯ ಜಾತಿಗಳ ಗುಂಪಿಗೆ ನಮ್ಮನ್ನು ಸೇರಿಸಿ, ಮೀಸಲಾತಿಯನ್ನು ಬೇರೆ ಬೇರೆ ಸಮುದಾಯಗಳಿಗೆ ಹಂಚಿಕೆ ಮಾಡಲಾಗಿದೆ. ಈ ಅನ್ಯಾಯ ಸರಿಪಡಿಸಿ ಅಲೆಮಾರಿ ಸಮುದಾಯದಲ್ಲಿನ 59 ಒಳಪಂಗಡಗಳಿಗೆ ಮಾತ್ರ ಶೇ 1ರಷ್ಟು ಪ್ರತ್ಯೇಕ ಮೀಸಲಾತಿ ಕೊಡಬೇಕು’ ಎಂದು ಆಗ್ರಹಿಸಿದರು.
ಯಲ್ಲಪ್ಪ ಹಿಮ್ಮಡಿ, ಹನುಮಂತಪ್ಪ ಬಿ.ಎಲ್., ರಾಜು ಮಾಲೂರು, ನಾಗರಾಜ್ ಎಚ್.ಸಿ., ಮಾರುತಿ ಪೊಂಡ್ರಿ, ಮಂಜಪ್ಪ ದಾವಣಗೆರೆ, ಹುಸೇನಪ್ಪ ರಾಯಚೂರು, ಶ್ರೀನಿವಾಸ ಸಿಂದೋಳು, ಮಂಜುಳಾ ಸಿಂದೋಳು, ತಿಪ್ಪೇಶಪ್ಪ ಗುರುರಾಜಪುರ ನೇತೃತ್ವ ವಹಿಸಿದ್ದರು.
‘ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿ’
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿಯವರು ಸುವರ್ಣ ವಿಧಾನಸೌಧ ಬಳಿಯ ವೇದಿಕೆಯಲ್ಲಿ ಧರಣಿ ಮಾಡಿದರು
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು. ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿಯವರು ಧರಣಿ ಮಾಡಿದರು.
ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ತ್ವರಿತವಾಗಿ ಚಿಕಿತ್ಸೆ ಒದಗಿಸಲು ಸ್ಥಳೀಯವಾಗಿ ಉತ್ತಮ ಆಸ್ಪತ್ರೆಗಳು ಲಭ್ಯವಿಲ್ಲ. ಮಣಿಪಾಲ ಅಥವಾ ಮಂಗಳೂರಿನ ಆಸ್ಪತ್ರೆಗೆ ತೆರಳಲು ತಡವಾಗಿ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಹಲವರು ಮೃತಪಟ್ಟಿದ್ದಾರೆ. ಹಾಗಾಗಿ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಮಾಸ್ತಪ್ಪ ನಾಯ್ಕ, ರಾಜೇಶ ನಾಯ್ಕ, ಭಾಸ್ಕರ ದೇವಾಡಿಗ, ನಾಗೇಂದ್ರ ಮೋಘೇರ, ಗಣೇಶ ದೇವಾಡಿಗ, ಪ್ರದೀಪ ಮಡಿವಾಳ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.