ಬೆಳಗಾವಿ: ಮಹಿಳೆಯೊಬ್ಬರು, ದ್ವಿಚಕ್ರವಾಹನದಲ್ಲಿ ಲಿಫ್ಟ್ ಕೊಡುತ್ತಿದ್ದ ಯುವಕನನ್ನು ಕುತ್ತಿಗೆ ಕೊಯ್ದು ಕೊಲ್ಲಲು ಯತ್ನಿಸಿದ ಘಟನೆ ಶುಕ್ರವಾರ ಕಾಕತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೋನಟ್ಟಿಯ ಶಾನೂರ್ ಆರ್. (30) ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ. ಆರೋಪಿ ಈರವ್ವ ಸಿದ್ರಾಯಿ ಮುಚ್ಚಂಡಿ (45) ಅವರನ್ನು ಬಂಧಿಸಲಾಗಿದೆ.
‘ಸೋನಟ್ಟಿಯಿಂದ ಹೋಗುತ್ತಿದ್ದ ಯುವಕನನ್ನು ಮಹಿಳೆ ಕಾಕತಿಗೆ ಬಿಡುವಂತೆ ಲಿಫ್ಟ್ ಕೇಳಿದ್ದಾರೆ. ಪರಿಚಯಸ್ಥರೂ ಆದ ಅವರನ್ನು ಶಾನೂರ್ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಮಹಿಳೆ ಹಿಂದಿನಿಂದ ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದಾರೆ. ಆಗ, ಇಬ್ಬರೂ ದ್ವಿಚಕ್ರವಾಹನದಿಂದ ಬಿದ್ದಿದ್ದಾರೆ. ತಪ್ಪಿಸಿಕೊಂಡು ಬಂದ ಯುವಕನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯನ್ನು ಚಾಕು ಸಮೇತ ಪೊಲೀಸರು ಬಂಧಿಸಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
‘ಮಹಿಳೆಯ ಪುತ್ರ ಈಚೆಗೆ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ. ಇದಕ್ಕೆ ಆತನ ಸ್ನೇಹಿತರೇ ಕಾರಣವೆಂದು ಮಹಿಳೆ ಆಗಾಗ ಜಗಳ ಮಾಡಿದ್ದರು. ಖಿನ್ನರಾಗಿದ್ದರು. ದ್ವೇಷದಿಂದ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಮಾಹಿತಿ ನೀಡಿದರು. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.