ADVERTISEMENT

ಅಪ್ಪಂದಿರ ದಿನ: ಅಪ್ಪನೆಂದರೆ ಪ್ರೀತಿ, ಸ್ಫೂರ್ತಿ

ಪ್ರದೀಪ ಮೇಲಿನಮನಿ
Published 19 ಜೂನ್ 2021, 19:30 IST
Last Updated 19 ಜೂನ್ 2021, 19:30 IST
ತಂದೆ ಮಹೇಶ್ವರ ಪತ್ತಾರ ಜನ್ಮದಿನದ ಸಂಭ್ರಮದಲ್ಲಿ ಪುತ್ರಿ ಕೃತಿಕಾ (ಎಡ ಬದಿ)
ತಂದೆ ಮಹೇಶ್ವರ ಪತ್ತಾರ ಜನ್ಮದಿನದ ಸಂಭ್ರಮದಲ್ಲಿ ಪುತ್ರಿ ಕೃತಿಕಾ (ಎಡ ಬದಿ)   

ಚನ್ನಮ್ಮನ ಕಿತ್ತೂರು: ‘ಅಪ್ಪ ತುಂಬಾ ಪ್ರೀತಿಯಿಂದ ನೋಡಿಕೊಳ್ಳತ್ತಿದ್ರು, ಅವರೇ ನಮ್ಮನ್ನ ಉತ್ತಮ ಶಾಲೆಗೆ ಸೇರಿಸಿದ್ರು. ಬಿಡುವಿದ್ದಾಗ ನಮ್ಮನ್ನೆಲ್ಲ ಪ್ರವಾಸಕ್ಕೆ ಕರ್ಕೊಂಡ್ ಹೋಗುತ್ತಿದ್ರು’.

ಕೋವಿಡ್–19 ಸೋಂಕಿನಿಂದ ಸಾವಿಗೀಡಾದ ತಂದೆ, ಇಲ್ಲಿಯ ಚೇತನ್ ಝರಾಕ್ಸ್ ಮಾಲೀಕ ಮಹೇಶ್ವರ ಪತ್ತಾರ ಬಗ್ಗೆ ಹೇಳುತ್ತ ಪುತ್ರಿ ಕೃತಿಕಾ ಕಣ್ಣೀರಾದರು.

‘ಜ.31ರಂದು ಅಪ್ಪನ ಜನ್ಮದಿನವನ್ನು ಕುಟುಂಬದವರೆಲ್ಲ ಸೇರಿ ಆಚರಿಸಿದ್ದೆವು. ಅಕ್ಕ, ಪಕ್ಕ ಕುಳ್ಳಿರಿಸಿಕೊಂಡು ಕೇಕ್ ಕತ್ತರಿಸಿದರು. ಪ್ರೀತಿಯಿಂದ ‘ಆ’ ಮಾಡೆಂದು ಕೇಕ್ ತಿನ್ನಿಸಿದರು. ಆ ರೀತಿಯ ಘಟನೆಗಳೆಲ್ಲವೂ ಈಗ ಬಹಳ ನೆನಪಾಗುತ್ತಿದೆ‌’ ಎಂದು ಗದ್ಗದಿತರಾದರು.

ADVERTISEMENT

‘ನಾನು ಈ ಬಾರಿ ಎಸ್ಸೆಸ್ಸೆಲ್ಸಿ ಓದುತ್ತಿದ್ದೇನೆ. ತಮ್ಮ 6ನೇ ಕ್ಲಾಸು. ಹಾಗೆ ಓದು, ನೀನು ಇದನ್ನೇ ಓದಬೇಕು ಎಂದು ನಿರ್ಬಂಧ ವಿಧಿಸಿದವರಲ್ಲ. ಚೆನ್ನಾಗಿ ಓದಬೇಕು, ಮಕ್ಕಳನ್ನ ಓದಿಸಬೇಕು ಎಂಬುದು ಮಾತ್ರ ಅವರ ಗುರಿ ಮತ್ತು ಕನಸಾಗಿತ್ತು’ ಎಂದರು.

‘ರಜೆ ಇದ್ದಾಗ ಕುಟುಂಬದವರನ್ನೆಲ್ಲ ಧರ್ಮಸ್ಥಳ, ಶೃಂಗೇರಿ, ಹಂಪಿಗೆ ಪ್ರವಾಸ ಕರೆದುಕೊಂಡು ಹೋಗುತ್ತಿದ್ದರು. ಮನೆದೇವರು ಶಿರಸಂಗಿಗೆ ಅನೇಕ ಬಾರಿ ಹೋಗಿದ್ದೆವು. ಮೆಲು ಮಾತಿನ, ಮಲ್ಲಿಗೆ ಹೃದಯದ ಅಪ್ಪ ಅವರಾಗಿದ್ದರು’ ಎಂದು ತಂದೆಯ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು.

ಶೀತ, ಜ್ವರ ಎಂದು ಮನೆಯಲ್ಲಿ ಹೇಳಿದರು. ಅದರ ಜೊತೆಗೆ ಕೆಮ್ಮು ಇತ್ತು. ವೈದ್ಯರಿಗೆ ತೋರಿಸಿದ್ದರು. ಧಾರವಾಡಕ್ಕೆ ಹೋದವರಿಗೆ ದೇಹದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಇದೆ ಎಂದಿದ್ದರು. ಚೇತರಿಸಿಕೊಳ್ಳಲಿಲ್ಲ. ಕೊನೆಗೂ ಅಪ್ಪ ನಮ್ಮನ್ನೆಲ್ಲ ಬಿಟ್ಟು ಹೋದ್ರು...’ ಎಂದು ಕಣ್ಣೀರಾದರು ಕೃತಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.