ಬೆಂಗಳೂರು: ಸಿಎನ್ಆರ್ ವೃತ್ತದ ಬಳಿ ಅಂಡರ್ಪಾಸ್ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ವೇಳೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿರುವುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ. ಈ ವರದಿಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಗುರುವಾರ ಮಂಡಿಸಲಾಗಿದೆ.
ಅಂಡರ್ಪಾಸ್ ನಿರ್ಮಾಣ ಕುರಿತು ಡಿಪಿಆರ್ ಸಿದ್ಧಪಡಿಸುವಂತೆ ಖಾಸಗಿ ವ್ಯಕ್ತಿಯೊಬ್ಬರಿಗೆ 2007ರಲ್ಲಿ ಸೂಚನೆ ನೀಡಲಾಗಿತ್ತು. ಅವರಿಗೆ 3.50 ಲಕ್ಷ ರೂಪಾಯಿ ಶುಲ್ಕ ನೀಡಲಾಯಿತು. ಡಿಪಿಆರ್ ಸಿದ್ಧಪಡಿಸುವ ಮುನ್ನ ಅವರು, ಆ ಪ್ರದೇಶದಲ್ಲಿ ವಾಹನ ದಟ್ಟಣೆ ಎಷ್ಟಿದೆ ಎಂಬುದನ್ನು ಕೇವಲ 12 ಗಂಟೆಗಳ ಕಾಲ ಪರಿಶೀಲಿಸಿದ್ದರು. `ಇಂಡಿಯನ್ ರೋಡ್ ಕಾಂಗ್ರೆಸ್' (ಐಆರ್ಸಿ) ರೂಪಿಸಿರುವ ನಿಯಮದ ಪ್ರಕಾರ ಡಿಪಿಆರ್ ಸಿದ್ಧಪಡಿಸುವ ಮುನ್ನ ಕನಿಷ್ಠ ಏಳು ದಿನಗಳ ಕಾಲ ವಾಹನ ಸಂಚಾರ ದಟ್ಟಣೆಯನ್ನು ಪರಿಶೀಲಿಸಬೇಕು ಎಂದು ಸಿಎಜಿ ವರದಿ ಹೇಳಿದೆ.
ಆ ಭಾಗದಲ್ಲಿ ಎಷ್ಟು ಮಂದಿ ಪಾದಚಾರಿಗಳು ಓಡಾಟ ನಡೆಸುತ್ತಾರೆ ಎಂಬ ಬಗ್ಗೆ ಡಿಪಿಆರ್ನಲ್ಲಿ ಮಾಹಿತಿ ಇರಲಿಲ್ಲ. ಯೋಜನೆ ಕುರಿತು ನೀಡಿರುವ ಡಿಪಿಆರ್ ಸಮರ್ಪಕವಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂದು ಸಿಎಜಿ ವರದಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ನಿಯಮಗಳ ಪ್ರಕಾರ ಏಳು ದಿನಗಳ ಕಾಲ ವಾಹನ ಸಂಚಾರ ದಟ್ಟಣೆ ಪರಿಶೀಲನೆ ಮಾಡದಿರುವುದಕ್ಕೆ ಕಾರಣ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಅಂಡರ್ಪಾಸ್ ನಿರ್ಮಾಣದ ಗುತ್ತಿಗೆಯನ್ನು ಖಾಸಗಿ ಕಂಪೆನಿಯೊಂದಕ್ಕೆ 2008ರ ಮೇ ತಿಂಗಳಲ್ಲಿ ನೀಡಲಾಯಿತು. 10 ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂದು ಗಡುವು ವಿಧಿಸಲಾಗಿತ್ತು. ಆದರೆ 2012ರ ಡಿಸೆಂಬರ್ ಕಳೆದರೂ ಕೆಲಸ ಪೂರ್ಣಗೊಳ್ಳಲಿಲ್ಲ. ಈ ಕಾಮಗಾರಿಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯೂಎಸ್ಎಸ್ಬಿ) ಸೇರಿದ ಜಮೀನನ್ನು ಬಳಸಿಕೊಳ್ಳಬೇಕಿತ್ತು.
ಆದರೆ ಯೋಜನೆಯು ದೋಷಪೂರ್ಣವಾಗಿತ್ತು. ಈ ಮೂರು ಸಂಸ್ಥೆಗಳ ಪ್ರಮುಖ ಕಟ್ಟಡಗಳ ಮೂಲಕ ಹಾದುಹೋಗುವಂತೆ ಅಂಡರ್ಪಾಸ್ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಹಾಗಾಗಿ ಮೂರೂ ಸಂಸ್ಥೆಗಳು ಈ ಕಾಮಗಾರಿಗೆ ತಮ್ಮ ಜಮೀನು ನೀಡಲು ನಿರಾಕರಿಸಿದವು ಎಂದು ವರದಿ ಬೊಟ್ಟುಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.