ADVERTISEMENT

ಅತ್ಯಾಚಾರಕ್ಕೆ ಯತ್ನಿಸಿ ಬಾಲಕಿಯ ಬರ್ಬರ ಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 19:59 IST
Last Updated 7 ಏಪ್ರಿಲ್ 2018, 19:59 IST

ಕೊಪ್ಪ: ತಾಲ್ಲೂಕಿನ ಹರಿಹರಪುರ ಸಮೀಪದ ಗ್ರಾಮವೊಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು. ಘಟನೆ ಸಂಬಂಧ ಬಾಲಕನನ್ನು ಶನಿವಾರ ಬಂಧಿಸಲಾಗಿದೆ.

6ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಈಕೆ ಪ್ರತಿ ದಿನ ಶಾಲೆಗೆ ಆಟೊದಲ್ಲಿ ಹೋಗಿ ಬರುತ್ತಿದ್ದಳು. ಮನೆ ಸಮೀಪ ಆಟೊ ಇಳಿದು ಹಾಡ್ಯದ ನಡುವಿನ ಕಾಲುದಾರಿಯಲ್ಲಿ ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಆಟೊದಿಂದ ಇಳಿದ ಕೂಡಲೇ ಮನೆಗೆ ಚಾಲಕ ಕರೆಮಾಡಿ ತಿಳಿಸಿದ್ದರು. ಮಗಳನ್ನು ಕರೆದುಕೊಂಡು ಹೋಗಲು ಮನೆಯಿಂದ ಬಂದ ತಾಯಿಗೆ ಮಗಳು ಕಾಣಿಸಲಿಲ್ಲ. ಸ್ಥಳೀಯರೊಂದಿಗೆ ಸುತ್ತಮುತ್ತ ಹುಡುಕಾಡಿದಾಗ ಸ್ವಲ್ಪ ದೂರದಲ್ಲಿ ಆಕೆಯ ನೀರಿನ ಬಾಟಲ್ ಬಿದ್ದಿರುವುದು ಕಂಡುಬಂತು. ಗಾಬರಿಗೊಂಡು ಮತ್ತಷ್ಟು ದೂರ ಹುಡುಕಾಟ ನಡೆಸಿದಾಗ ಕಾಡು ಗಿಡಗಳ ಪೊದೆಯ ಮಧ್ಯೆ ರಕ್ತಸಿಕ್ತವಾಗಿ ಬಿದ್ದಿದ್ದ ಮಗಳ ಮೃತದೇಹ ಕಾಣಿಸಿತು.

ADVERTISEMENT

ಕೂಡಲೇ ಗ್ರಾಮಸ್ಥರು ನೀಡಿದ ಮಾಹಿತಿಯಂತೆ ಪೊಲೀಸರು ಬಂದು ಸಾರ್ವಜನಿಕರೊಂದಿಗೆ ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದರು. ಈ ಹಿಂದೆ ಹಲವು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ, ಪಂಚಾಯಿತಿ ನಡೆಸಿ ಬುದ್ದಿ ಹೇಳಿಸಿಕೊಂಡಿದ್ದ ಬಾಲಕನ ಮೇಲೆ ಅನುಮಾನ ಬಲವಾಯಿತು.

ಆತನನ್ನು ವಿಚಾರಣೆ ನಡೆಸಿದಾಗ ನಿರಾಕರಿಸಿದನಾದರೂ, ಮನೆಗೆ ಹೋಗಿ ಪರಿಶೀಲನೆ ನಡೆಸಿದಾಗ ಒಗೆದು ಒಣಗಲು ಹಾಕಿದ್ದ ಆತನ ಬಟ್ಟೆಯಿಂದ ರಕ್ತ ಮಿಶ್ರಿತ ನೀರು ಇಳಿಯುತ್ತಿದ್ದುದು ಕಂಡುಬಂತು. ಬಳಿಕ ಪೊಲೀಸರು ಆತನನ್ನು ಬಂಧಿಸಿದರು. ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಈ ಹಿಂದೆ ಹಲವು ಬಾರಿ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಸಂದರ್ಭ ಯಾರಾದರೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೆ ಆತನ ಮೇಲೆ ಇಲಾಖೆ ಕ್ರಮಕೈಗೊಂಡು ಇಂತಹ ದುರ್ಘಟನೆ ತಪ್ಪಿಸಬಹುದಿತ್ತು ಎಂದು ಎಸ್‌ಪಿ ಅಣ್ಣಾಮಲೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.