ಬೆಂಗಳೂರು: `ವಂಶವಾಹಿ ಜೀವವಿಜ್ಞಾನ ಕ್ಷೇತ್ರದಲ್ಲಿನ ಅನ್ವೇಷಣೆಗಳು ಔಷಧ ಸಂಶೋಧನೆಗೆ ಉಪಯುಕ್ತವಾಗಲಿದೆ~ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.
ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಜೀವವಿಜ್ಞಾನ ಮತ್ತು ಅನುವಂಶಿಕ ವಿಜ್ಞಾನದ ಹನ್ನೊಂದನೇ ರಾಷ್ಟ್ರಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
`ವಂಶವಾಹಿ ಜೀವವಿಜ್ಞಾನ ಕ್ಷೆತ್ರದಲ್ಲಿನ ಅನ್ವೇಷಣೆಗಳಿಂದ ವೈಜ್ಞಾನಿಕ ಜ್ಞಾನ ವೃದ್ಧಿಯಾಗುತ್ತದೆ, ಮಾನವ ಕಲ್ಯಾಣಕ್ಕೂ ಸಹಕಾರಿಯಾಗುತ್ತದೆ. ವಂಶವಾಹಿ ಕಾಯಿಲೆ ನಿವಾರಣೆ ಮಾಡಲು, ರೋಗ ನಿರೋಧಕ ಬೆಳೆಗಳನ್ನು ಅಭಿವೃದ್ಧಿಪಡಿಸಲು ಇದು ಸಹಕಾರಿಯಾಗಲಿದೆ. ಮಾನವ ಜನಾಂಗಕ್ಕೆ ಹಲವು ರೀತಿಯಲ್ಲಿ ಉಪಯುಕ್ತವೂ ಆಗಲಿದೆ~ಎಂದು ಅವರು ಹೇಳಿದರು.
`ವಂಶವಾಹಿ ಕಾಯಿಲೆಗಳಿಗೆ ಚಿಕಿತ್ಸೆ ಕಂಡು ಹಿಡಿಯಲು ವಿಜ್ಞಾನಿಗಳು ಶ್ರಮಿಸಬೇಕು. ಅಸಮರ್ಪಕ ಅಂಗಾಂಗ ಬೆಳವಣಿಗೆ (ಡೌನ್ಸ್ ಸಿಂಡ್ರೋಮ್), ಅಪಸ್ಮರ ಮುಂತಾದ ಕಾಯಿಲೆಗಳಿಗೆ ವಂಶವಾಹಿ ಚಿಕಿತ್ಸೆ ವಿಧಾನಗಳನ್ನು ಪತ್ತೆ ಹಚ್ಚಬೇಕಿದೆ~ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ. ಡಾ. ಎನ್.ಪ್ರಭುದೇವ್ ಕರೆ ನೀಡಿದರು.
ಅನುವಂಶಿಕ ಜೀವವಿಜ್ಞಾನ ಕ್ಷೇತ್ರದಲ್ಲಿನ ಮೂಲ ಸಂಶೋಧನೆಯ ಅಗತ್ಯತೆಯನ್ನು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಂಸ್ಥೆ (ನ್ಯಾಕ್) ನಿರ್ದೇಶಕ ಡಾ. ಎಚ್.ಎ. ರಂಗನಾಥ್ ವಿವರಿಸಿ, ಹೈಬ್ರಿಡ್ ತಳಿ ಅಭಿವೃದ್ಧಿ ವಿಷಯ ಈಗಲೂ ಚರ್ಚಾರ್ಹ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಡಾ. ಎಸ್. ಮಹದೇವನ್, ಅಣುಜೀವವಿಜ್ಞಾನದ ವಿಭಾಗದ ಡಾ. ಎಂ.ಸಿ. ಗಾಯಿತ್ರಿ, ವಿಜ್ಞಾನಿ ಡಾ. ಡಿ.ಜಿ. ಕೃಷ್ಣಪ್ಪ, ಡಾ. ಬಿ.ಎಚ್.ಎಂ. ನಿಜಲಿಂಗಪ್ಪ, ಡಾ. ಎ.ಕೆ. ಶ್ರೀವಾತ್ಸವ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.