ಬೆಂಗಳೂರು: ಅಪಹರಣ ಹಾಗೂ ಕೊಲೆಗೆ ಯತ್ನ ಪ್ರಕರಣ ಸಂಬಂಧ ಬಂಧಿಸಿರುವ ನಟ ಸುನಾಮಿ ಕಿಟ್ಟಿ ಹಾಗೂ ಆತನ ಮೂವರು ಸ್ನೇಹಿತರನ್ನು ನಗರದ 9ನೇ ಎಸಿಎಂಎಂ ನ್ಯಾಯಾಲಯವು 5 ದಿನಗಳವರೆಗೆ ಪೊಲೀಸರ ಕಸ್ಟಡಿಗೆ ನೀಡಿದೆ.
ಅಪಹರಣಕ್ಕೀಡಾಗಿದ್ದ ಮರಿಯಪ್ಪನಪಾಳ್ಯದ ‘ಲ್ಯಾಂಡ್ ಬಾರ್ ಆ್ಯಂಡ್ ರೆಸ್ಟೊರೆಂಟ್’ ಸಪ್ಲೈಯರ್ ಗಿರೀಶ್ (27) ನೀಡಿದ್ದ ದೂರಿನನ್ವಯ ಆರೋಪಿಗಳನ್ನು ಬಂಧಿಸಿದ್ದ ಜ್ಞಾನಭಾರತಿ ಪೊಲೀಸರು, ನ್ಯಾಯಾಲಯಕ್ಕೆ ಶನಿವಾರ ಸಂಜೆ ಹಾಜರುಪಡಿಸಿದ್ದರು.
‘ಕೃತ್ಯದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಅನುಮಾನ ಇರುವುದರಿಂದ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಕೋರಿದ್ದೆವು. ನಮ್ಮ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಪ್ರಮುಖ ಆರೋಪಿ ಸುನೀಲ್ ತಲೆಮರೆಸಿಕೊಂಡಿದ್ದಾರೆ. ಹಲ್ಲೆಗೀಡಾಗಿದ್ದ ತೌಸಿತ್ ಕೂಡ ಸಿಕ್ಕಿಲ್ಲ’ ಎಂದು ಪೊಲೀಸರು ತಿಳಿಸಿದರು.
‘ಸುನೀಲ್ ಪತ್ನಿ ತೌಸಿತ್ ಜತೆ ಸಲುಗೆ ಬೆಳೆಸಿದ್ದರು. ಅದೇ ಕಾರಣಕ್ಕೆ ಸುನೀಲ್, ಈ ಕೃತ್ಯ ಎಸಗಲು ಸ್ನೇಹಿತ ಸುನಾಮಿ ಕಿಟ್ಟಿಗೆ ಹೇಳಿದ್ದರು. ಕಿಟ್ಟಿ ಹಾಗೂ ಆತನ ಸ್ನೇಹಿತರು, ಸಪ್ಲೈಯರ್ ಗಿರೀಶ್ ಹಾಗೂ ತೌಸಿತ್ನನ್ನು ಫೆ. 28ರಂದು ಅಪಹರಿಸಿ ಹೊರಮಾವು ಬಳಿಯ ತೋಟದ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ನಡೆಸಿದ್ದರು. ಪಿಸ್ತೂಲ್ ತೋರಿಸಿ ಬೆದರಿಸಿದ್ದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.