ಬೆಂಗಳೂರು: ನಗರದ ಡಿಕನ್ಸನ್ ರಸ್ತೆಯಲ್ಲಿ ಶನಿವಾರ ಆರಂಭವಾದ ಜೋಸ್ ಆಲುಕ್ಕಾಸ್ ಆಭರಣ ಮಳಿಗೆಯನ್ನು ಉದ್ಘಾಟಿಸಲು ಬಂದಿದ್ದ ತಮಿಳು ಚಿತ್ರನಟ ಡಾ.ವಿಜಯ್ ಅವರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ವಿಜಯ್ ಅವರು ಆಭರಣ ಮಳಿಗೆಯನ್ನು ಉದ್ಘಾಟಿಸಲು ಬರುತ್ತಿರುವ ವಿಷಯವನ್ನು ಮೊದಲೇ ತಿಳಿದಿದ್ದ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಮಳಿಗೆಯ ಬಳಿ ಜಮಾಯಿಸಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು.
ಈ ವೇಳೆ ನೂಕು ನುಗ್ಗಲು ಉಂಟಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಹಂತದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಅಭಿಮಾನಿಗಳ ಗುಂಪನ್ನು ಚದುರಿಸಿದರು. ಪೊಲೀಸರ ಲಾಠಿ ಏಟನ್ನು ತಪ್ಪಿಸಿಕೊಳ್ಳುವ ಯತ್ನದಲ್ಲಿ ಹಲವು ಅಭಿಮಾನಿಗಳು ಕೆಳಗೆ ಬಿದ್ದು ಗಾಯಗೊಂಡರು.
ಇದೇ ವೇಳೆ ಕಮರ್ಷಿಯಲ್ಸ್ಟ್ರೀಟ್ ಠಾಣೆಯ ಮುಖ್ಯ ಕಾನ್ಸ್ಟೇಬಲ್ ಹನುಮಯ್ಯ ಹಾಗೂ ಕಾನ್ಸ್ಟೇಬಲ್ ರಾಘವೇಂದ್ರ ಅವರಿಗೂ ಸಣ್ಣ ಪುಟ್ಟ ತರಚಿದ ಗಾಯಗಳಾಗಿವೆ.
ವಿಜಯ್ ಅವರನ್ನು ನೋಡಲು ಸುಮಾರು ಐದು ಸಾವಿರ ಅಭಿಮಾನಿಗಳು ಮಳಿಗೆಯ ಬಳಿ ಜಮಾಯಿಸಿದ್ದರು. ಇದರಿಂದ ನೂಕು ನುಗ್ಗಲು ಉಂಟಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಯಿತು. ಆದ ಕಾರಣ ಪೊಲೀಸರು ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿ ಅಭಿಮಾನಿಗಳನ್ನು ನಿಯಂತ್ರಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.