ADVERTISEMENT

ಅಮಾನತುಗೊಂಡ ಇನ್‌ಸ್ಪೆಕ್ಟರ್ ವಿರುದ್ಧ ಪತ್ನಿ ದೂರು

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಬೆಂಗಳೂರು: ಎರಡು ವರ್ಷಗಳ ಹಿಂದೆ ವೈಟ್‌ಫೀಲ್ಡ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದು, ಈಗ ಅಮಾನತಿನಲ್ಲಿರುವ ಗೋಪಾಲಕೃಷ್ಣ ಅವರ ವಿರುದ್ಧ ಅವರ ಪತ್ನಿ ಸುನೀತಾ ಸೋಮವಾರ ದೂರು ದಾಖಲಿಸಿದ್ದಾರೆ.

ಗೋಪಾಲಕೃಷ್ಣ ಅವರನ್ನು ವೈಟ್‌ಫೀಲ್ಡ್ ಠಾಣೆಯ ಇನ್‌ಸ್ಪೆಕ್ಟರ್ ಹುದ್ದೆಯಿಂದ ಜಿಲ್ಲಾ ಅಪರಾಧ ದಾಖಲಾತಿ ವಿಭಾಗಕ್ಕೆ ಎರಡು ವರ್ಷಗಳ ಹಿಂದೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರು ಆ ಹುದ್ದೆಗೆ ಹಾಜರಾಗಿರಲಿಲ್ಲ. ಇದೇ ಕಾರಣದಿಂದ ಅವರನ್ನು ಅಶಿಸ್ತಿನ ಕಾರಣ ನೀಡಿ ಅಮಾನತ್ತಿನಲ್ಲಿ ಇಡಲಾಗಿದೆ.

`ಗೋಪಾಲಕೃಷ್ಣ ದಿನವೂ ನನಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಕುಡಿದು ಮನೆಗೆ ಬಂದು ಹಿಂಸೆ ನೀಡುತ್ತಿದ್ದಾರೆ. ಇದರಿಂದ ಮನೆಯಲ್ಲಿ ನೆಮ್ಮದಿಯೇ ಹಾಳಾಗಿದೆ ಎಂದು ಸುನೀತಾ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಂಪತಿಗೆ ಮಧು ಎಂಬ ಮಗಳು, ಯೋಗೇಶ್ ಎಂಬ ಮಗ ಇದ್ದಾನೆ. ಮಗಳು 4ನೇ ತರಗತಿ ಓದುತ್ತಿದ್ದು, ಮಗ 5ನೇ ತರಗತಿ ಕಲಿಯುತ್ತಿದ್ದಾನೆ. ಘಟನೆ ಬಗ್ಗೆ ಪ್ರತಿಕ್ರಿಯೆಗೆ ಗೋಪಾಲಕೃಷ್ಣ ಲಭ್ಯವಾಗಿಲ್ಲ. ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.