ADVERTISEMENT

ಆಗ ಗನ್‌ಮ್ಯಾನ್, ಈಗ ಶಾಸಕ...

ಮಾಜಿ ಸಿ.ಎಂ ಎಸ್‌.ಎಂ.ಕೃಷ್ಣರ ಗನ್‌ಮ್ಯಾನ್‌ ಆಗಿದ್ದ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:32 IST
Last Updated 16 ಮೇ 2018, 19:32 IST
ಆರ್‌.ಮಂಜುನಾಥ್‌
ಆರ್‌.ಮಂಜುನಾಥ್‌   

ಬೆಂಗಳೂರು: ಗನ್‌ಮ್ಯಾನ್ ಆಗಿ ರಾಜಕಾರಣಿಗಳ ಹಿಂದೆ ನಿಂತಿರುತ್ತಿದ್ದ ಆರ್‌.ಮಂಜುನಾಥ್‌ ಈಗ ದಾಸರಹಳ್ಳಿ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ.

18 ವರ್ಷ ಗನ್‌ಮ್ಯಾನ್‌ ಆಗಿ ಕೆಲಸ ಮಾಡಿರುವ ಅವರು ರಾಜಕಾರಣಿಗಳ ಹಾವ ಭಾವ, ಜೀವನ ಶೈಲಿ ಹಾಗೂ ಕೆಲಸವನ್ನು ಹತ್ತಿರದಿಂದ ನೋಡಿದ್ದಾರೆ. ಆರಂಭದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ಉದ್ಯೋಗ ಮಾಡಿದ್ದ ಅವರು ಬಳಿಕ ಗುಪ್ತಚರ ವಿಭಾಗದಲ್ಲಿಯೂ ಕೆಲಸ ಮಾಡಿದ್ದಾರೆ.

ನಂತರ ಪ್ರಸಿದ್ಧ ವ್ಯಕ್ತಿಗಳ ಗನ್‌ಮ್ಯಾನ್ ಆಗಿ ನೇಮಕಗೊಂಡರು. ‘ಬೆಳೆದು ಬಂದ ಹಾದಿಯನ್ನು ನೆನೆದು ನಾಚಿಗೆ ಪಡುವುದಿಲ್ಲ. ಬದಲಾಗಿ ಹೆಮ್ಮ ಪಡುತ್ತೇನೆ. ಕಷ್ಟದ ದಿನಗಳನ್ನು ಮರೆಯುವುದಿಲ್ಲ’ ಎಂದು ಪ್ರಜಾವಾಣಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

ADVERTISEMENT

ಈಗಲೂ ಕೂಡ ರಾಜಕಾರಣಿಗಳು ಹಾಗೂ ಜನರ ಬಾಯಲ್ಲಿ ಅವರು ‘ಮಂಜಣ್ಣ ಗನ್‌ಮ್ಯಾನ್‌’ ಎಂದೇ ಕರೆಸಿಕೊಳ್ಳುತ್ತಾರೆ. ತಮಾಷೆಯ ಸಂಗತಿ ಎಂದರೆ ‘ಟ್ರೂ ಕಾಲರ್’ ಕೂಡ ಅದೇ ಹೆಸರಿನಲ್ಲಿ ಅವರ ಗುರುತನ್ನು ಹೇಳುತ್ತದೆ.

ಮೊದಲ ಬಾರಿಗೆ ಅವರು ದಾಸರಹಳ್ಳಿಯಲ್ಲಿ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದರು. ಬಿಜೆಪಿ ಅಭ್ಯರ್ಥಿ ಎಸ್‌.ಮುನಿರಾಜು ವಿರುದ್ಧ ಸ್ಪರ್ಧಿಸಿದ್ದ ಅವರು ಒಟ್ಟು 94,044 ಮತಗಳನ್ನು ಪಡೆದು, 10,675 ಮತಗಳ ಅಂತರದಿಂದ ಗೆದ್ದಿದ್ದಾರೆ. ನಾಮಪತ್ರದಲ್ಲಿ ಪತ್ನಿಯ ಹೆಸರಿನಲ್ಲಿರುವುದು ಸೇರಿದಂತೆ ಒಟ್ಟು ಆಸ್ತಿ ಮೌಲ್ಯ ₹ 25.46 ಕೋಟಿ ಎಂದು ಅವರು ಘೋಷಿಸಿಕೊಂಡಿದ್ದರು.

ಎರಡೂವರೆ ವರ್ಷಗಳ ಹಿಂದೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಅವರು ಮಲ್ಲಸಂದ್ರ ವಾರ್ಡ್‌ನಲ್ಲಿ ಕಣಕ್ಕಿಳಿದಿದ್ದರು. ಆಗ ಕೇವಲ 300 ಮತಗಳಿಂದ ಸೋತಿದ್ದರು.

ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮಂಜುನಾಥ್ ಅವರು ಗನ್‌ಮ್ಯಾನ್ ಆಗಿ ಕೆಲಸ ಮಾಡಿದ್ದರು.

‘ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾದ ಬಳಿಕ ನಾನು ಸ್ವಯಂ ನಿವೃತ್ತಿ ಪಡೆದುಕೊಂಡೆ. ನಂತರ ನನಗೆ ಜನಸೇವೆ ಮಾಡುವ ಉತ್ಸಾಹ ಹೆಚ್ಚಾಯಿತು. ಇದರಿಂದಾಗಿ ಜೆಡಿಎಸ್‌ ಪಕ್ಷಕ್ಕೆ ಸೇರಿದೆ. ದಾಸರಹಳ್ಳಿ ನನ್ನ ಸ್ವಕ್ಷೇತ್ರ ಆಗಿದ್ದರಿಂದ ಇಲ್ಲಿ ಚುನಾವಣೆಗೆ ನಿಂತೆ. ಜನಸೇವೆಯೇ ನನ್ನ ಕನಸು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.