ADVERTISEMENT

ಆಸ್ತಿ ವಿವಾದ- ಮಹದೇವಪುರ ಬಳಿ ದಂಪತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 19:30 IST
Last Updated 14 ಆಗಸ್ಟ್ 2012, 19:30 IST

ಬೆಂಗಳೂರು: ಆಸ್ತಿ ವಿವಾದದ ಕಾರಣದಿಂದ ಮನನೊಂದ ದಂಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಬಳಿಯ ಪುಟ್ಟಪ್ಪಲೇಔಟ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಪುಟ್ಟಪ್ಪಲೇಔಟ್ ನಾಲ್ಕನೇ ಅಡ್ಡರಸ್ತೆ ನಿವಾಸಿ ರಾಮಚಂದ್ರರೆಡ್ಡಿ (57) ಮತ್ತು ಅವರ ಪತ್ನಿ ಯಶೋಧಮ್ಮ (50) ಆತ್ಮಹತ್ಯೆ ಮಾಡಿಕೊಂಡವರು.

ದಂಪತಿ ಕುಟುಂಬ ಸದಸ್ಯರೊಂದಿಗೆ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದರು. ಆ ಶೆಡ್‌ನ ಜಾಗದ ಒಡೆತನದ ವಿಷಯವಾಗಿ ರಾಮಚಂದ್ರರೆಡ್ಡಿ ಮತ್ತು ಅವರ ಅಣ್ಣ ವೀರರೆಡ್ಡಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದೇ ವಿಷಯವಾಗಿ ವೀರರೆಡ್ಡಿ ಅವರು, ಸಂಜೆ ರಾಮಚಂದ್ರರೆಡ್ಡಿಯವರ ಮನೆಗೆ ಬಂದು ಜಗಳವಾಡಿ ಹೋಗಿದ್ದರು.

ಇದರಿಂದ ಬೇಸರಗೊಂಡ ರಾಮಚಂದ್ರರೆಡ್ಡಿ ಅವರು ಮನೆಯಿಂದ ಹೊರ ಹೋಗಿ ಮದ್ಯ ಕುಡಿದು ರಾತ್ರಿ ಎಂಟು ಗಂಟೆ ಸುಮಾರಿಗೆ ಮನೆಗೆ ವಾಪಸ್ ಬಂದರು. ಆ ನಂತರ ಅವರು ಪತ್ನಿಯೊಂದಿಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು.

ಈ ವಿಷಯ ತಿಳಿದ ದಂಪತಿಯ ಮಗ ಬಾಲಕೃಷ್ಣ ಅವರು, ಪೋಷಕರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರಿಬ್ಬರೂ ಮೃತಪಟ್ಟರು ಎಂದು ಮಹದೇವಪುರ ಪೊಲೀಸರು ತಿಳಿಸಿದ್ದಾರೆ.

ದಂಪತಿಯ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.