ADVERTISEMENT

ಆಹಾರ ಪದ್ಧತಿ: ಮುಸ್ಲಿಮರು ಬೀದಿಗಿಳಿಯಲಿ

ಜನ ಸಮುದಾಯದ ನಡುವೆ ದ್ವೇಷ ಬೆಳೆಸುತ್ತಿರುವ ಕೇಂದ್ರ: ದಲಿತ ಚಳಿವಳಿಗಾರ ಕಾಂಚ ಐಲಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 19:38 IST
Last Updated 17 ಜೂನ್ 2017, 19:38 IST
ವೇದಿಕೆಯಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತ ನಗರಗೆರೆ ರಮೇಶ್,  ಪ್ರೊ. ಅಪೂರ್ವಾನಂದ ಝಾ, ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಪಿ.ವಿ.ಶೋಯೆಬ್, ಕಾಂಚ ಐಲಯ್ಯ, ಯೋಗೇಶ ಮಾಸ್ಟರ್‌ ಇದ್ದರು.
ವೇದಿಕೆಯಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತ ನಗರಗೆರೆ ರಮೇಶ್, ಪ್ರೊ. ಅಪೂರ್ವಾನಂದ ಝಾ, ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಪಿ.ವಿ.ಶೋಯೆಬ್, ಕಾಂಚ ಐಲಯ್ಯ, ಯೋಗೇಶ ಮಾಸ್ಟರ್‌ ಇದ್ದರು.   

ಬೆಂಗಳೂರು: ‘ನಮ್ಮ ಆಹಾರ ಪದ್ಧತಿ ಕಸಿಯಲು ಸಾಧ್ಯವಿಲ್ಲ ಎಂಬ ಪ್ರತಿಪಾದನೆಯ ಮುಸ್ಲಿಂ ಯುವಜನತೆ ಬೀದಿಗೆ ಇಳಿದು ಕೇಂದ್ರ ಸರ್ಕಾರದ ವಿರುದ್ಧ  ಪ್ರತಿಭಟಿಸಬೇಕು’ ಎಂದು ದಲಿತ ಚಳಿವಳಿಗಾರ ಪ್ರೊಫೆಸರ್‌ ಕಾಂಚ ಐಲಯ್ಯ ಪ್ರತಿಪಾದಿಸಿದರು.

‘ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ’ ಶನಿವಾರ ಆಯೋಜಿಸಿದ್ದ  ‘ಶಿಕ್ಷಣದಲ್ಲಿ ಕೇಸರೀಕರಣ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್‌, ಬಿಜೆಪಿಯವರ ಹಸುಗಳನ್ನು ಮುಸ್ಲಿಮರು ಕೊಲ್ಲುವುದಿಲ್ಲ. ಅವರ ಆಹಾರ ಅವರು ಉಣ್ಣುತ್ತಾರೆ.  ಒಂದು ಜನ ಸಮುದಾಯದ ಆಹಾರ ಪದ್ಧತಿಯ ಮೇಲೆ ನಿಯಂತ್ರಣ ಹೇರಲು ಹೊರಟಿರುವ ಕೇಂದ್ರದ ಕ್ರಮ ಜನ ಸಮುದಾಯದ ನಡುವೆ ದ್ವೇಷ ಭಾವನೆ ಹುಟ್ಟಿಸುವಂತಿದೆ’ ಎಂದರು.

‘ಈ ದೇಶದ ಮುಸ್ಲಿಮರು ಅರಬ್‌, ಪಾಕ್‌ನಿಂದ ಬಂದವರಲ್ಲ. ಅವರೆಲ್ಲಾ ಇಲ್ಲಿನ ದಲಿತರು ಮತ್ತು ಹಿಂದುಳಿದ ವರ್ಗದವರು. ಆರ್ಯರು ಮಾತ್ರ ಇಂಡೊ ಯುರೋಪಿಯನ್ನರು’ ಎಂದು ಹೇಳಿದರು.

‘ಮುಸ್ಲಿಂ ಸಮುದಾಯದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಓದು, ಬರಹ ಮತ್ತು ಹೋರಾಟಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ನೆಲದ ಆದಿವಾಸಿ, ದಲಿತರು, ಹಿಂದುಳಿದ ವರ್ಗದವರ ಜೊತೆ ಹೆಚ್ಚು ಹೆಚ್ಚಾಗಿ ಬೆರೆಯುವುದನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್‌ ಅಪೂರ್ವಾನಂದ ಝಾ ಮಾತನಾಡಿ, ‘ಮೋದಿ ಸರ್ಕಾರ ಕೇವಲ ಶಿಕ್ಷಣದಲ್ಲಿ ಮಾತ್ರ ಕೇಸರೀಕರಣ ಮಾಡುತ್ತಿಲ್ಲ. ಪ್ರಪಂಚವನ್ನೆಲ್ಲಾ ಹಿಂದೂ ಚೌಕಟ್ಟಿನಲ್ಲಿ ನೋಡಲು ಹೊರಟಿದೆ’ ಎಂದರು.

‘ಜಾತ್ಯತೀತ ರಾಜಕೀಯ ಪಕ್ಷಗಳು ಮುಸ್ಲಿಮರ ಬಗ್ಗೆ ಮಾತನಾಡುತ್ತಿಲ್ಲ.  ಅವರನ್ನು ಕಾಳಜಿ ಮಾಡಬೇಕಾದವರೇ  ಮೌನವಾಗಿರುವುದರಿಂದ ಕೇಸರೀಕರಣ ಬಲಗೊಳ್ಳುತ್ತಿದೆ’ ಎಂದು  ಅಭಿಪ್ರಾಯಪಟ್ಟರು.

ಬ್ರಾಹ್ಮಣ, ಜೈನ, ಬನಿಯಾ ರೆಜಿಮೆಂಟ್‌ ಏಕಿಲ್ಲ?
‘ಸೈನ್ಯದಲ್ಲಿ ಬ್ರಾಹ್ಮಣ, ಜೈನ ಮತ್ತು ಬನಿಯಾ ರೆಜಿಮೆಂಟ್‌ಗಳು ಏಕಿಲ್ಲ’ ಎಂದು ಪ್ರಶ್ನಿಸಿದ ಕಾಂಚ ಐಲಯ್ಯ, ‘ದೇಶ ಕಾಯಲು ದಲಿತರು, ಹಿಂದುಳಿದ ಜಾತಿಗೆ ಸೇರಿದ ಸೈನಿಕರನ್ನು ನಿಲ್ಲಿಸಲಾಗಿದೆ. ಇವರು ಮಾತ್ರ ಐಐಟಿ, ಐಐಎಂ, ಶಿಕ್ಷಣ ಸಂಸ್ಥೆಗಳು, ಮಾಧ್ಯಮ, ಟಿ.ವಿ.ನೆಟ್‌ ವರ್ಕ್‌ಗಳ ಮೇಲೆ ಅಧಿಪತ್ಯ ಸ್ಥಾಪಿಸಿ ಮೆರೆಯುತ್ತಿದ್ದಾರೆ’  ಎಂದು ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.