ADVERTISEMENT

ಎರಡು ತಿಂಗಳಲ್ಲಿ ಕಾಮಗಾರಿ ಪೂರೈಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 19:30 IST
Last Updated 24 ಜೂನ್ 2013, 19:30 IST

ಬೆಂಗಳೂರು: ಕಸ್ತೂರ ಬಾ ರಸ್ತೆಯ ಕಾಮಗಾರಿಯನ್ನು ಉಪಲೋಕಾಯುಕ್ತ ಎಸ್.ಬಿ.ಮಜಗೆ ಅವರು ಸೋಮವಾರ ಪರಿಶೀಲಿಸಿ, ಆಗಸ್ಟ್ ತಿಂಗಳ ಕೊನೆಯವರೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ.

ಕಸ್ತೂರ ಬಾ ರಸ್ತೆ ಮತ್ತು ಪಾದಚಾರಿ ಮಾರ್ಗದ ಅವ್ಯವಸ್ಥೆ ಕುರಿತು `ಪ್ರಜಾವಾಣಿ'ಯಲ್ಲಿ ಸೋಮವಾರ ವಿಶೇಷ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಚರ್ಚಿಸಿದ ಅವರು, ಪ್ರತಿ ವಾರದ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಲೋಕಾಯುಕ್ತ ಮುಖ್ಯ ಎಂಜಿನಿಯರ್ ಪಿ.ಆರ್.ಅನಿಲ್‌ಕುಮಾರ್ ಮಾತನಾಡಿ, `ಪ್ರಜಾವಾಣಿ' ವರದಿನೋಡಿ ಜನರ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲು ಉಪಲೋಕಾಯುಕ್ತ ಎಸ್.ಬಿ.ಮಜಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಸಮನ್ವಯದ ಕೊರತೆಯಿಂದ ಕಾಮಗಾರಿ ತಡವಾಗಿರುವುದು ಕಂಡುಬಂದಿದೆ. ಮುಂದಿನ ಆಗಸ್ಟ್ ತಿಂಗಳ ಕೊನೆಯವರೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶಿದ್ದಾರೆ' ಎಂದರು.

`ಪಾದಚಾರಿ ಮಾರ್ಗ ಮತ್ತು ರಸ್ತೆ ಅವ್ಯವಸ್ಥೆಯಿಂದ ಜನರು ಪರದಾಡುವಂತಾಗಿದೆ. ಮಳೆ ನೀರು ನಿಂತರೂ ಹರಿದು ಹೋಗಲು ಅಲ್ಲಿ ಯಾವುದೇ ವ್ಯವಸ್ಥೆಯನ್ನೂ ಮಾಡಿಲ್ಲ. ಇದರಿಂದ ಇದನ್ನು ಸರಿಪಡಿಸುವಂತೆ ಹೇಳಲಾಗಿದೆ' ಎಂದರು.

ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ಬಸವರಾಜ ಕಬಾಡೆ, `ಕಸ್ತೂರ ಬಾ ರಸ್ತೆಯ ಒಳಚರಂಡಿ ಮಾರ್ಗಗಳು  ಸುಮಾರು 40-50 ವರ್ಷಗಳಷ್ಟು ಹಳೆಯವು. ಇದರಿಂದ, ಅವುಗಳಿಗೆ ಸೂಕ್ತ ವ್ಯವಸ್ಥೆ ಮಾಡಿ ನಂತರ ಕಾಮಗಾರಿ ಕೈಗೊಳ್ಳಬೇಕು. ಅಲ್ಲದೆ, ಇಲ್ಲಿಯೇ ದೂರವಾಣಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಲೇನ್‌ಗಳು ಇವೆ. ಇವುಗಳಿಗೆ ಹಾನಿಯಾಗದಂತೆ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ಕಾಮಗಾರಿ ವಿಳಂಬವಾಗಿದೆ' ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.