ADVERTISEMENT

ಏಕಕಾಲಕ್ಕೆ ಎರಡು ಪದವಿ ಅಧ್ಯಯನ

ಬೆಂಗಳೂರು ವಿ.ವಿ ಅಕಾಡೆಮಿಕ್‌ ಕೌನ್ಸಿಲ್‌ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:52 IST
Last Updated 10 ಸೆಪ್ಟೆಂಬರ್ 2013, 19:52 IST

ಬೆಂಗಳೂರು: ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ಪದವಿ ಕೋರ್ಸುಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಲು ಬೆಂಗಳೂರು ವಿಶ್ವವಿದ್ಯಾಲಯವು ತೀರ್ಮಾನಿಸಿದೆ. ಜ್ಞಾನಭಾರತಿ ಕ್ಯಾಂಪಸ್ಸಿನ ಸೆನೆಟ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಅಕಾಡೆಮಿಕ್‌ ಕೌನ್ಸಿಲ್‌ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಬುಧ­ವಾರ ನಡೆಯುವ ಸಿಂಡಿಕೇಟ್‌ ಸಭೆಯ ಅನುಮೋದನೆಗೆ ಈ ಪ್ರಸ್ತಾಪವನ್ನು ಕಳುಹಿಸಲಾಗಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ ಸೂಚನೆಗೆ ಮೇರೆಗೆ ವಿಶ್ವವಿದ್ಯಾಲಯದಲ್ಲಿ ಎರಡು ಕೋರ್ಸು­ಗಳನ್ನು ಏಕಕಾಲಕ್ಕೆ ಅಧ್ಯಯನಕ್ಕೆ ಅವಕಾಶ ನೀಡಲು ಜಂಟಿ ಪದವಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸಿಂಡಿಕೇಟ್‌ ಸಭೆಯಲ್ಲಿ ಅನುಮೋದನೆ ದೊರೆತ ಬಳಿಕ ಅನು­ಷ್ಠಾನಕ್ಕೆ ಅಗತ್ಯ ನೀತಿಗಳನ್ನು ತಯಾರ­ಸಲು ಸಮಿತಿಯೊಂದನ್ನು ರಚಿಸಲಾಗು­ವುದು ಎಂದು ಕುಲಪತಿ ಪ್ರೊ.ಬಿ.­ತಿಮ್ಮೇಗೌಡ ತಿಳಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಟಿ ಪದವಿ ಕಾರ್ಯಕ್ರಮ ಜಾರಿಗೆ ಬಂದರೆ  ವಿದ್ಯಾರ್ಥಿ ಒಂದು ನಿಯಮಿತ ಪದವಿಯ ಜೊತೆಗೆ ಸಂಜೆ ಕಾಲೇಜುಗಳ ಮೂಲಕ ಅಥವಾ ದೂರ ಶಿಕ್ಷಣದ ಮೂಲಕ ಮತ್ತೊಂದು ಪದವಿ ಕೋರ್ಸನ್ನೂ ಅಧ್ಯಯನ ನಡೆಸಬಹುದು ಎಂದರು.

ಪದವಿ ಕಾಲಮಿತಿ 4 ವರ್ಷ ಏರಿಕೆ: ವಿವಿಧ ಪದವಿ ಕೋರ್ಸುಗಳನ್ನು ಪೂರ್ಣಗೊಳಿಸಲು ಈ ವರೆಗೆ ಇದ್ದ ಆರು ವರ್ಷದ ಕಾಲಮಿತಿಯನ್ನು 10 ವರ್ಷಕ್ಕೆ ಹಾಗೂ ಸ್ನಾತಕೋತ್ತರ ಪದವಿ ಕೋರ್ಸು ಪೂರ್ಣಗೊಳಿಸಲು ಇದ್ದ ನಾಲ್ಕು ವರ್ಷ ಮಿತಿಯನ್ನು ಆರು ವರ್ಷಕ್ಕೆ ಹೆಚ್ಚಿಸಲು ಅಕಾಡೆಮಿಕ್‌ ಕೌನ್ಸಿಲ್‌ ಸಭೆ ಒಪ್ಪಿಗೆ ನೀಡಿದೆ.

ಸಿಂಡಿಕೇಟ್‌ ಒಪ್ಪಿಗೆ ದೊರೆತರೆ ಕಳೆದ 10 ವರ್ಷಗಳಲ್ಲಿ ಕಾರಣಾಂತರದಿಂದ ಯಾವುದೇ ಪದವಿಯನ್ನು ಪೂರ್ಣ­ಗೊಳಿಸದೆ ಉಳಿಸಿಕೊಂಡಿರುವ ವಿದ್ಯಾರ್ಥಿ­­ಗಳು ಮರುಪರೀಕ್ಷೆಗೆ ಹಾಜ­ರಾಗಿ ಉತ್ತೀರ್ಣರಾಗಬಹುದು. ಅದೇ ರೀತಿ ಸ್ನಾತಕೋತ್ತರ ಪದವಿ ಪೂರ್ಣ­ಗೊಳಿಸಲು ಹೆಚ್ಚುವರಿ ಎರಡು ವರ್ಷಗಳ ಕಾಲಾವಕಾಶ ದೊರೆತಿದೆ. ಆದರೆ, ಇದು ಕಾನೂನು ಪದವಿಗಳಿಗೆ ಅನ್ವಯ ಆಗು­ವು­ದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

23 ಕಾಲೇಜುಗಳಿಗೆ ಸಂಯೋಜನೆ ಇಲ್ಲ: ಸಂಯೋಜನೆ ನವೀಕರಣ ವಿಷಯದಲ್ಲಿ ವಿವಾದಕ್ಕೆ ಒಳಗಾಗಿದ್ದ  37 ಬಿ.ಇಡಿ ಕಾಲೇಜುಗಳ ಪೈಕಿ  14 ಕಾಲೇಜುಗಳಿಗೆ ಮಾತ್ರ 2013–14ನೇ ಸಾಲಿನ ಸ್ಥಳೀಯ  ವಿಚಾರಣಾ ಸಮಿತಿ (ಎಲ್‌ಐಸಿ)ಗಳನ್ನು ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

37 ಕಾಲೇಜುಗಳ ಸಂಯೋಜನೆ ನವೀಕರಣಾ ಮಾಡಬೇಕೇ ಬೇಡವೇ ಎಂಬ ಬಗ್ಗೆ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿಯ ಬಗ್ಗೆಯೂ ಸಭೆಯಲ್ಲಿ ಅಪಸ್ವರ ಕೇಳಿ ಬಂತು. ಸಮಿತಿ ನೀಡಿರುವ ಅಂಕಗಳನ್ನು ಆಧರಿಸಿ 100ಕ್ಕೂ ಹೆಚ್ಚು ಅಂಕ ಪಡೆದ 14 ಕಾಲೇಜುಗಳಿಗೆ ಎಲ್‌ಐಸಿ ಕಳುಹಿಸಲು ನಿರ್ಧರಿಸಲಾಯಿತು.

ನಾಲ್ವರು ಶಾಸಕರು ಹಾಜರು:  ಅಕಾ­ಡೆಮಿಕ್‌ ಕೌನ್ಸಿಲ್‌ಗೆ ಸರ್ಕಾರ ನಾಮ­ನಿರ್ದೇಶನ ಮಾಡಿದ್ದ ಐವರು ಶಾಸಕರಲ್ಲಿ ನಾಲ್ವರು ಸಭೆಗೆ ಹಾಜರಾಗಿ­ದ್ದರು.ಎಸ್‌.ಆರ್‌. ವಿಶ್ವನಾಥ್‌, ಶಿವಣ್ಣ, ಎಚ್‌.ಸಿ.­ಬಾಲಕೃಷ್ಣ, ಡಿ.ಸುಧಾಕರ್‌ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.