ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಪೀಣ್ಯದಲ್ಲಿರುವ ಬಸವೇಶ್ವರ ಬಸ್ ನಿಲ್ದಾಣದ ಮೂಲಕ ಕಣ್ಣನೂರು ಹಾಗೂ ಕಲ್ಲಿಕೋಟೆಗಳಿಗೆ ಜುಲೈ 1ರಿಂದ ರಾಜಹಂಸ ಬಸ್ಗಳ ಸೇವೆ ಆರಂಭಿಸಲಿದೆ.
ಕಳೆದ ವರ್ಷ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಪೀಣ್ಯ ನಿಲ್ದಾಣದಿಂದ ಬಸ್ ಗಳ ಸಂಚಾರ ಆರಂಭಿಸಲಾಗಿತ್ತು. ಪ್ರಯಾಣಿಕರ ನೀರಸ ಪ್ರತಿಕ್ರಿಯೆ ಕಾರಣಕ್ಕೆ ನಾಲ್ಕೇ ತಿಂಗಳಲ್ಲಿ ಇದನ್ನು ಕೈಬಿಡಲಾಗಿತ್ತು.
ಉತ್ತರ ಕರ್ನಾಟಕ ಭಾಗಕ್ಕೆ ಮೆಜೆಸ್ಟಿಕ್ನಿಂದಲೇ ಬಸ್ ಸಂಚಾರ ಆರಂಭವಾಗಿತ್ತು. ₹ 39 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪೀಣ್ಯ ಬಸ್ ನಿಲ್ದಾಣವನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಸಂಸ್ಥೆ ಅನ್ಯ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಿದೆ. ಪೀಣ್ಯ–ಕಣ್ಣನೂರು ಬಸ್ ಪ್ರಯಾಣ ದರ ₹ 524. ಪೀಣ್ಯದಿಂದ ರಾತ್ರಿ 8ಕ್ಕೆ ಹೊರಟು ಬೆಳಿಗ್ಗೆ 5ಕ್ಕೆ ಕಣ್ಣನೂರು ತಲುಪಲಿದೆ. ಕಣ್ಣನೂರಿನಿಂದ ರಾತ್ರಿ 8.30ಕ್ಕೆ ಹೊರಟು ಪೀಣ್ಯಕ್ಕೆ ಬೆಳಿಗ್ಗೆ 5.15ಕ್ಕೆ ಬರಲಿದೆ.
ಪೀಣ್ಯ–ಕಲ್ಲಿಕೋಟೆ ಬಸ್ ದರ ₹ 507. ಪೀಣ್ಯದಿಂದ ರಾತ್ರಿ 9ಕ್ಕೆ ಹೊರಟು ಬೆಳಿಗ್ಗೆ 8ಕ್ಕೆ ಕಲ್ಲಿಕೋಟೆಗೆ ತಲುಪಲಿದೆ. ಕಲ್ಲಿಕೋಟೆಯಿಂದ ರಾತ್ರಿ 10ಕ್ಕೆ ಹೊರಟು ಪೀಣ್ಯಕ್ಕೆ ಬೆಳಿಗ್ಗೆ 7.30ಕ್ಕೆ ಬರಲಿದೆ. ಹೆಚ್ಚಿನ ಮಾಹಿತಿಗಾಗಿ 080–44554422 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.